ಅಮಾನತುಗೊಂಡಿರುವ ಬಿಹಾರದ ಜೆಡಿಯು ಶಾಸಕಿ ಮನೋರಮಾ ದೇವಿಗೆ ಜಾಮೀನು
Update: 2016-06-06 18:11 GMT
ಪಟ್ನಾ,ಜೂ.6: ಗಯಾದ ತನ್ನ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಸಂದರ್ಭ ಮದ್ಯದ ಬಾಟ್ಲಿಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಜೆಡಿಯು ಶಾಸಕಿ ಹಾಗೂ ಆದಿತ್ಯ ಸಚ್ದೇವ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಕಿ ಯಾದವ್ನ ತಾಯಿ ಮನೋರಮಾ ದೇವಿ ಅವರಿಗೆ ಪಟ್ನಾ ಉಚ್ಚ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಅವರಿಗೆ ಜಾಮೀನು ನೀಡಿದ ನ್ಯಾ.ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು,ತನಿಖೆಗೆ ಸಹಕರಿಸುವಂತೆ ಸೂಚಿಸಿತು.
ಕೊಲೆ ಪ್ರಕರಣದಲ್ಲಿ ರಾಕಿಯ ಬೆನ್ನ ಹಿಂದೆ ಬಿದ್ದಿದ್ದ ಪೊಲೀಸರು ಶಾಸಕಿಯ ನಿವಾಸದ ಮೇಲೆ ದಾಳಿ ನಡೆಸಿದಾಗ ಮದ್ಯದ ಬಾಟ್ಲಿಗಳು ಪತ್ತೆಯಾಗಿದ್ದವು. ಸಂಪೂರ್ಣ ಪಾನನಿಷೇಧವಿರುವ ಬಿಹಾರದಲ್ಲಿ ಇದು ಅಪರಾಧವಾಗಿದೆ. ದಾಳಿಯ ಬಳಿಕ ಒಂದೆರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಮನೋರಮಾ ದೇವಿ ಮೇ.17ರಂದು ಪೊಲೀಸರಿಗೆ ಶರಣಾಗಿದ್ದರು.