ಕೇರಳ-ಲಕ್ಷದ್ವೀಪಕ್ಕೆ ಮುಂಗಾರು ಆಗಮನ
ಹೊಸದಿಲ್ಲಿ, ಜೂ.8: ಈ ವರ್ಷದ ಮುಂಗಾರು ಮಳೆ ಕೇರಳ ತೀರ ಹಾಗೂ ಲಕ್ಷದ್ವೀಪಗಳಿಗೆ ಬುಧವಾರ ಆಗಮಿಸಿದೆ. ಅದು ಮುನ್ಸೂಚನೆಗಿಂತ ಒಂದು ದಿನ ತಡವಾಗಿ ಬಂದಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಿಸಿದೆ.
ಮುಂದಿನ ದಿನಗಳಲ್ಲಿ ಕೇರಳಾದ್ಯಂತ ‘ಉತ್ತಮ ಮಳೆಯನ್ನು’ ನಿರೀಕ್ಷಿಸಲಾಗಿದೆಯೆಂದು ತಿರುವನಂತಪುರದ ಐಎಂಡಿ ಕಚೇರಿಯ ನಿರ್ದೇಶಕ ಕೆ.ಸಂತೋಷ್ ತಿಳಿಸಿದ್ದಾರೆ.
ಮುಂಗಾರು ಮಳೆಯ ಭಾರತದ ನೀರಾವರಿ, ಜಲಾಶಯಗಳ ತುಂಬುವಿಕೆ ಇತ್ಯಾದಿಗಳ ಶೇ.70ರಷ್ಟು ಅಗತ್ಯವನ್ನು ಪೂರೈಸುತ್ತದೆ. ದೇಶದ ಅರ್ಧದಷ್ಟು ಕೃಷಿ ಭೂಮಿ ಜೂನ್ನಿಂದ ಸೆಪ್ಟಂಬರ್ನವರೆಗೆ ಬರುವ ಮಳೆಯನ್ನೇ ವಿವಿಧ ಬೆಳೆಗಳಿಗಾಗಿ ಅವಲಂಬಿಸಿದೆ.
ಮಂಗಳವಾರ ರಾತ್ರಿಯಿಂದೀಚೆಗೆ ಕೇರಳದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ವಝವರದಲ್ಲಿ ಮನೆಯೊಂದರ ಮೇಲೆ ಮಣ್ಣು ಹಾಗೂ ಬಂಡೆಗಳು ಕುಸಿದು ಒಬ್ಬ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷ ಸಾಧಾರಣಕ್ಕಿಂತ ಜಾಸ್ತಿ ಮಳೆಯಾಗಲಿದೆ. ಆಹಾರದ ಕಣಜ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ,ರಾಜಸ್ಥಾನ ಹಾಗೂ ದಿಲ್ಲಿಗಳಲ್ಲಿ ಶೇ.108ರಷ್ಟು ಮಳೆಯಾಗಲಿದೆ. ಭತ್ತ, ಬೇಳೆಕಾಳು ಇತ್ಯಾದಿ ಪ್ರಮುಖ ಬೆಳೆಗಳಾಗುವ ಮಧ್ಯ ಭಾರತ ಹಾಗೂ ತಪ್ಪಲು ಪ್ರದೇಶಗಳಲ್ಲಿ ಶೇ.11ರಷ್ಟು ಮಳೆ ಬೀಳಲಿದೆಯೆಂದು ಹವಾಮಾನ ಇಲಾಖೆ ಹೇಳಿದೆ.
ಮುಂಗಾರಿನ ಕೊನೆಯ ಭಾಗವಾದ ಸೆಪ್ಟಂಬರ್ನಲ್ಲಿ ಭಾರೀ ಮಳೆಯಾಗಿ ನೆರೆ ಹಾಗೂ ಬೆಳೆ ನಷ್ಟಕ್ಕೆ ಕಾರಣವಾಗಬಹುದೆಂದು ಅದು ಮುನ್ಸೂಚನೆ ನೀಡಿದೆ.