ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಜಿಶಾ ತಂದೆ
ತಿರುವನಂತಪುರಂ, ಜೂನ್ 10: ಪೆರುಂಬಾವೂರ್ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆ ಪ್ರಕರಣದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಜಿಶಾ ತಂದೆ ಪಾಪ್ಪು ಮುಖ್ಯಮಂತ್ರಿ ಪಿಣರಾಯಿ ವಿಜಯನ್ರಿಗೆ ದೂರು ನೀಡಿದ್ದಾರೆ.
ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಡಿವೈಎಸ್ಪಿ ಕೆ. ಅನಿಲ್ ಕುಮಾರ್. ಸಿಐ ಕೆ.ಎನ್. ರಾಜೇಶ್, ಎಸ್ಸೈ ಸೋನಿ ಮತ್ತಾಯಿ ಇವರನ್ನು ಅಮಾನತುಮಾಡಬೇಕೆಂದು ಜಿಶಾ ತಂದೆ ಕೆ.ವಿ. ಪಾಪ್ಪು ದೂರಿನಲ್ಲಿ ವಿನಂತಿಸಿದ್ದಾರೆ. ಜಿಶಾರ ಮೃತದೇಹವನ್ನು ಉರಿಸಬೇಡಿ ಎಂದು ಪೊಲೀಸರನ್ನು ವಿನಂತಿಸಿದರೂ ಕ್ಯಾರೇ ಮಾಡದೆ ಮೃತದೇಹವನ್ನು ಅವರು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಜಿಶಾ ಕೊಲೆಯಾದ ಸುದ್ದಿಯನ್ನು ಐದು ದಿವಸಗಳ ಕಾಲ ಪೊಲೀಸರು ಮುಚ್ಚಿಟ್ಟಿದ್ದೇ ಸಾಕ್ಷ್ಯವನ್ನು ನಾಶಪಡಿಸಲಿಕ್ಕಾಗಿದೆ. ಪ್ರಕರಣದಲ್ಲಿ ಆರೋಪಿಸಲ್ಪಟ್ಟಿರುವ ರಾಜಕಾರಣಿಗೆ ನಿಕಟರಾದ ಎಸ್ಸೈ ಈಗಲೂ ಅದೇ ಸ್ಥಳದಲ್ಲಿ ಮುಂದುವರಿಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಂದಿಯನ್ನು ಸ್ಥಳಾಂತರ ಮಾಡಿದ್ದರೂ ಈ ಎಸ್ಸೈ ಹಳೆಯ ಜಾಗದಲ್ಲಿ ಕೆಲಸಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ತನಿಖೆಯನ್ನು ಬುಡಮೇಲುಗೊಳಿಸಲಿಕ್ಕಾಗಿ ತನಿಖಾ ತಂಡದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಪಾಪ್ಪು ಹೇಳಿದ್ದಾರೆ.
ಜೋಮೋನ್ ಪುತ್ತನ್ ಪುರಕ್ಕಲ್ ಜೊತೆ ಬಂದು ಗೃಹಕಾರ್ಯದರ್ಶಿ ನಳಿನಿ ನೆಟ್ಟೋರೆಯವರನ್ನು ಭೇಟಿಯಾಗಿ ಪಾಪ್ಪು ದೂರು ನೀಡಿದ್ದಾರೆ.