ಬಿಜೆಪಿಗಿಂತ ಆಪ್ ಉತ್ತಮ, ದಿಲ್ಲಿಯಲ್ಲಿ ಒಳ್ಳೆಯ ಕೆಲಸ ಮಾಡಿದೆ: ಓಂಪುರಿ
ಹೊಸದಿಲ್ಲಿ: ಬಿಜೆಪಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷಕ್ಕೆ ನನ್ನ ಒಲವು. ದೆಹಲಿಯಲ್ಲಿ ಆಪ್ ಸರಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಬಾಲಿವುಡ್ ನಟ ಓಂ ಪುರಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ಸರಕಾರ 49 ದಿನಗಳ ಆಡಳಿತ ಅವಧಿಯಲ್ಲಿ ಮಾಡಿದಂತೆ ಸಮಸ್ಯೆಗಳಿಗೆ ಬೆನ್ನು ಹಾಕಿ ಪಲಾಯನ ಮಾಡಿಲ್ಲ ಎಂದು ಶಹಬ್ಬಾಸ್ ಗಿರಿ ನೀಡಿದರು.
ಆಪ್ ಮತ್ತು ಬಿಜೆಪಿ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದಾಗ, "ಆಪ್ ಗೆ ಒಳ್ಳೆಯದಾಗಲಿ. ಅದು ಒಳ್ಳೆಯ ಕೆಲಸ ಮಾಡುತ್ತಿದೆ. ಇದನ್ನು ಮುಂದುವರಿಸುತ್ತದೆ ಎಂಬ ನಿರೀಕ್ಷೆ ಇದೆ. ಕಳೆದ ಬಾರಿಯಂತೆ ಪಲಾಯನ ಮಾಡಬಾರದು. ನೆನಪಿಡಿ" ಎಂದು ಪ್ರತಿಕ್ರಿಯಿಸಿದರು.
ಅನುರಾಗ್ ಕಶ್ಯಪ್ ಅವರ ಉಡ್ತಾ ಪಂಜಾಬ್ ವಿವಾದದ ಬಗ್ಗೆ ಕೇಳಿದಾಗ, "ಸಿಬಿಎಫ್ಸಿ ಮುಖ್ಯಸ್ಥ ಪಹಲಾಜ್ ನಿಹಲಾನಿ ನಿರ್ದೇಶಕರಂತೆ ವರ್ತಿಸುತ್ತಿದ್ದಾರೆ" ಎಂದು ಚುಚ್ಚಿದರು. ಜನರ ಧ್ವನಿಯನ್ನು ಅವರು ಹತ್ತಿಕ್ಕುತ್ತಿದ್ದಾರೆ. ಇದು ಕೇವಲ ಸಿನಿಮಾ. ಅವರು ಕ್ರಾಂತಿ ಮಾಡುತ್ತಿಲ್ಲ. ಅವರು ಕೈಯಲ್ಲಿ ಅಸ್ತ್ರ ಹಿಡಿದು ನಿಂತಿದ್ದಾರೆ. ನಹಲಾನಿ ಕೇವಲ ವಾಣಿಜ್ಯ ಚಿತ್ರಗಳನ್ನು ಮಾಡಿದ್ದಾರೆ. ಅವರ ಕೆಲಸ ಕೇವಲ ಸರಕಾರದ ಮನವೊಲಿಸುವುದು ಎಂದು ಲೇವಡಿ ಮಾಡಿದರು.