ಜಿಶಾ ಕೊಲೆ ಪ್ರಕರಣ: ರೇಖಾ ಚಿತ್ರಕ್ಕೆ ಹೋಲುವ ಗುಜರಾತ್ ಯುವಕನ ಬಂಧನ
ಕೊಚ್ಚಿ, ಜೂನ್,14: ಜಿಶಾ ಕೊಲೆಪ್ರಕರಣದಲ್ಲಿ ಆರೋಪಿಯದೆಂದು ತಯಾರಿಸಲಾದ ರೇಖಾಚಿತ್ರಕ್ಕೆ ಹೋಲುವ ಗುಜರಾತ್ ನಿವಾಸಿ ವ್ಯಕ್ತಿಯೊಬ್ಬನನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಯುವಕನನ್ನು ಜಿಶಾ ಕೊಲೆಪ್ರಕರಣದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. ಪನಂಪಳ್ಳಿ ನಗರದಲ್ಲಿ ಊರವರೇ ಸೇರಿ ಗುಜರಾತ್ ನಿವಾಸಿಯಾದ ದಿನೇಶ್ ಕಾಂತಿಲಾಲ್ ಪಟೇಲ್ನನ್ನು(38) ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಈತನಿಗೆ ರೇಖಾ ಚಿತ್ರದ ಹೋಲಿಕೆ ಮಾತ್ರವಲ್ಲ. ಈತನ ಹಲ್ಲುಗಳಲ್ಲಿ ಎಡೆ ಕೂಡಾ ಇವೆ. ಊರಿಗೆ ಹೋಗಿದ್ದ ಈತ ಇದೀಗ ಕೆಲಸದ ಸ್ಥಳಕ್ಕೆ ಮರಳಿ ಬಂದಿದ್ದ. ಪ್ರಾಥಮಿಕ ತನಿಖೆಯಲ್ಲಿ ಕಾಂತಿಲಾಲ್ನ ದೇಹದಲ್ಲಿ ಗಾಯಗಳ್ಯಾವುದೂ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೂರಿನಿಂದ ಇನ್ನೊಬ್ಬ ಯುವಕನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆ.
ಅದೇ ವೇಳೆ ಕೇರಳದ ಎಲ್ಲ ಆಸ್ಪತ್ರೆಗಳಿಗೂ ತನಿಖೆಯನ್ನು ವಿಸ್ತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಜಿಶಾ ಹತ್ಯೆಯ ಸಂದರ್ಭದಲ್ಲಿ ಅಕ್ರಮಿಯೊಂದಿಗೆ ಹೋರಾಡಿದ್ದು ಅಕ್ರಮಿ ಗಾಯಗೊಂಡಿರುವುದು ಖಚಿತವಾದ ಹಿನ್ನೆಲೆಯಲ್ಲಿ ಯಾವುದಾದರೂ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆಪಡೆದಿರುವ ಸಾಧ್ಯತೆ ಇದ್ದು ಅದನ್ನು ಪತ್ತೆಹಚ್ಚುವುದು ಪೊಲೀಸರ ಉದ್ದೇಶವಾಗಿದೆ. ಪರಿಸರದ ಸೂಪರ್ ಮಾರ್ಕೆಟ್ಗಳ, ಹೋಟೆಲ್ಗಳ ಸಿಸಿಟಿವಿ ಪರಿಶೀಲನೆಯಲ್ಲಿದೆ. ಜಿಶಾ ಇಲ್ಲಿಗೆ ಬಂದಿದ್ದರೇ ಅವರ ಜೊತೆ ಯಾರಾದರೂ ಇದ್ದಿದ್ದರೆ ಎಂದು ತಿಳಿಯುವುದು ಈ ಪರಿಶೀಲನೆಯ ಉದ್ದೇಶವಾಗಿದೆ.