ಮುಝಫ್ಫರ್ನಗರ ದಂಗೆಯ ಬಳಿಕ 50 ಸಾವಿರ ಮುಸ್ಲಿಮರ ವಲಸೆ: ಅಸದುದ್ದೀನ್
ಹೈದರಾಬಾದ್, ಜೂ.18: ಮುಝಫ್ಫರ್ನಗರ ದಂಗೆಯ (2013) ಬಳಿಕ 50 ಸಾವಿರ ಮುಸ್ಲಿಮರು ವಲಸೆ ಹೋಗಿ ದ್ದಾರೆಂದು ಪ್ರತಿಪಾದಿಸಿರುವ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ, ಆರೋಪಿತ ಹಿಂದೂಗಳ ವಲಸೆಯ ವಿಚಾರದಲ್ಲಿ ಕೈರಾನಾಗೆ ಕಳುಹಿಸಿದಂತೆಯೇ ಅಲ್ಲಿಗೂ ಸತ್ಯಶೋಧನ ಸಮಿತಿಯೊಂದನ್ನು ಕಳುಹಿಸು ವುದೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶದ ಕೈರಾನಾದಿಂದ ಪಲಾಯನ ಮಾಡಿವೆಯೆನ್ನಲಾಗಿರುವ 346 ಕುಟುಂಬಗಳ ಪಟ್ಟಿಯು ‘ಬೋಗಸ್’ ಎಂದು ವ್ಯಾಖ್ಯಾನಿಸಿರುವ ಹೈದರಾಬಾದ್ನ ಲೋಕಸಭಾ ಸದಸ್ಯ, ಈ ವಿಷಯದಲ್ಲಿ ‘ನಾಟಕ’ವೊಂದನ್ನು ಸೃಷ್ಟಿಸುವ ಬಿಜೆಪಿ ಹಾಗೂ ಎಸ್ಪಿಗಳ ಹಿತಾಸಕ್ತಿಗೆ ಪೂರಕವಾಗಿದೆ ಎಂದಿದ್ದಾರೆ.
ಮುಝಫ್ಫರ್ನಗರ ದಂಗೆಗಳ ಬಳಿಕ 50 ಸಾವಿರ ಮಂದಿ, ತಲೆ ತಲಾಂತರಗಳಿಂದ ವಾಸಿಸುತ್ತಿದ್ದ ಮೂಲ ಸ್ಥಳವನ್ನು ಬಿಟ್ಟು ಹೋಗಿದ್ದಾರೆ ಎಂದು ಪ್ರತಿಪಾದಿಸಿರುವ ಉವೈಸಿ, ಇದು ಸ್ವಾತಂತ್ರಾನಂತರ ನಡೆದಿರುವ ಅಲ್ಪಸಂಖ್ಯಾತರ ‘ಸಾಮೂಹಿಕ ಮೂಲೋತ್ಪಾಟನ’ ಎಂದು ವ್ಯಾಖ್ಯಾನಿಸಿದ್ದಾರೆ.
ಬಿಜೆಪಿಯಿಂದ ಸತ್ಯಶೋಧನ ಸಮಿತಿಯೊಂದನ್ನು ಕಳುಹಿಸಲು ಸಾಧ್ಯವೇ? ಸ್ಥಳಾಂತರಗೊಂಡಿರುವ 50 ಸಾವಿರ ಮಂದಿಗೆ ಏನಾಗಿದೆಯೆಂಬುದನ್ನು ತಿಳಿಯಲು ನಿಯೋಗವೊಂದನ್ನು ಕಳುಹಿಸಲು ಬಿಜೆಪಿಯ ಬಳಿ ಸಮಯವಿದೆಯೇ? ಎಂದವರು ಪ್ರಶ್ನಿಸಿದ್ದಾರೆ.
ಮೂಲಭೂತವಾಗಿ ಬಿಜೆಪಿಯ ಬಳಿ ಬೇರೆ ವಿಷಯವೇ ಇಲ್ಲ. ಇದು ಬಿಜೆಪಿಯ ನೈಜ ಮುಖವನ್ನು ತೋರಿಸಿದೆ. ಅಭಿವೃದ್ಧಿಯ ಕುರಿತು ಮಾತು, ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಅವರ ಘೋಷಣೆ ಎಲ್ಲವೂ ಕೇವಲ ನಾಟಕ. ದುರದೃಷ್ಟವಶಾತ್ ಅವರಿಗೆ ಎಸ್ಪಿಯೂ ಸಹಾಯ ಮಾಡುತ್ತಿದೆಯೆಂದು ಉವೈಸಿ ಆರೋಪಿಸಿದ್ದಾರೆ.