ಸಹೋದರನ ಹಸುಗೂಸನ್ನೇ ಬಾವಿಗೆಸೆದ ಭೂಪ!

Update: 2016-06-23 04:17 GMT

ಪುಣೆ, ಜೂ.23: ಬಾವಿ ನೀರು ಹಂಚಿಕೊಳ್ಳುವ ಸಂಬಂಧ ಅಣ್ಣ- ತಮ್ಮಂದಿರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಸಹೋದರನ ಒಂದು ತಿಂಗಳ ಹಸುಗೂಸನ್ನು ಬಾವಿಗೆಸೆದ ಅಮಾನವೀಯ ಘಟನೆ ಖೇಡ್ ಸಮೀಪದ ಖಲುಂಬ್ರೆ ಎಂಬ ಗ್ರಾಮದಲ್ಲಿ ನಡೆದಿದೆ. ಒಂದು ತಿಂಗಳ ಹಸುಗೂಸು ದರ್ಶನ್ ಜಲಸಮಾಧಿಯಾಗಿದೆ. ಆರೋಪಿ ಶಿವಾಜಿ ಬೋತ್ರೆಯನ್ನು ಬಂಧಿಸಲಾಗಿದೆ.

ಶಿವಾಜಿ ಹಾಗೂ ಆತನ ಸಹೋದರ ಅಜಿತ್ ಅಕ್ಕಪಕ್ಕದಲ್ಲಿ ವಾಸವಿದ್ದರು. ಪೈಪ್‌ಲೈನ್ ನೀರು ಬಳಸಿಕೊಳ್ಳುವ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ವ್ಯಾಜ್ಯ ಇತ್ತು. ಕೆಲ ತಿಂಗಳ ಹಿಂದೆ ಶಿವಾಜಿಯ ಒಂಬತ್ತು ವರ್ಷದ ಮಗ, ನೆಲದ ಆಳದಲ್ಲಿ ನಿರ್ಮಿಸಿದ್ದ ನೀರಿಗೆ ಟ್ಯಾಂಕಿಗೆ ಬಿದ್ದು ಮೃತಪಟ್ಟಿದ್ದ ಎಂದು ಚಕಾನ್ ಠಾಣೆಯ ಸಹಾಯಕ ಇನ್‌ಸ್ಪೆಕ್ಟರ್ ಮಹೇಶ್ ಧವನ್ ವಿವರಿಸಿದರು.

ಈ ಘಟನೆ ಬಳಿಕ ಶಿವಾಜಿ, ಅಜಿತ್ ಹಾಗೂ ಆತನ ಪತ್ನಿ ವಿರುದ್ಧ ಸಿಟ್ಟಾಗಿದ್ದ. ಮಂಗಳವಾರ ಸಂಜೆ ಎರಡೂ ಕುಟುಂಬಗಳ ನಡುವೆ ಮತ್ತೆ ಜಲಯುದ್ಧ ಆರಂಭವಾಯಿತು. ಮಗುವನ್ನು ಎತ್ತಿಕೊಂಡಿದ್ದ ಅಜಿತ್ ಪತ್ನಿ ಅಶ್ವಿನಿಯೂ ಅಲ್ಲಿದ್ದರು. ದಿಢೀರನೇ ಮಗುವನ್ನು ಕಸಿದುಕೊಂಡ ಶಿವಾಜಿ ಮಗುವನ್ನು ಬಾವಿಗೆ ಎಸೆದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News