ಗಾಯಕ್ವಾಡ್ ವಿರುದ್ಧ ಆರೋಪ ರೂಪಿಸುವಿಕೆಗೆ ಮುಂಬೈ ಹೈಕೋರ್ಟ್ ತಡೆಯಾಜ್ಞೆ ವಿಸ್ತರಣೆ
ಮುಂಬೈ,ಜೂ.24: ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಬಲಪಂಥೀಯ ಹಿಂದು ಸಂಘಟನೆ ಸನಾತನ ಸಂಸ್ಥಾದ ಕಾರ್ಯಕರ್ತ ಸಮೀರ ಗಾಯಕ್ವಾಡ್ ವಿರುದ್ಧ ಆರೋಪವನ್ನು ರೂಪಿಸುವುದಕ್ಕೆ ತಾನು ನೀಡಿದ್ದ ತಡೆಯಾಜ್ಞೆಯನ್ನು ಮುಂಬೈ ಉಚ್ಚ ನ್ಯಾಯಾಲಯವು ಶುಕ್ರವಾರ ವಿಸ್ತರಿಸಿದೆ. ಪ್ರಾಸಿಕ್ಯೂಷನ್ ಬ್ರಿಟನ್ನಿಂದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.
ಪನ್ಸಾರೆ ಮತ್ತು ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಎಂ.ಎಂ.ಕಲಬುರ್ಗಿ ಅವರ ಹತ್ಯೆಗಳ ನಡುವೆ ಯಾವುದೇ ಸಂಬಂಧವಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೋರಲಾಗಿದೆ. ಸಿಬಿಐ ಎಲ್ಲ ಮೂರೂ ಕೊಲೆಗಳು ನಡೆದಿದ್ದ ಸ್ಥಳಗಳಲ್ಲಿ ಪತ್ತೆಯಾಗಿದ್ದ ಖಾಲಿಗುಂಡುಗಳನ್ನು ಪರೀಕ್ಷೆಗಾಗಿ ಸ್ಕಾಟ್ಲಂಡ್ ಯಾರ್ಡ್ ಪೊಲೀಸರಿಗೆ ಕಳುಹಿಸಿದೆ.
ಗಾಯಕ್ವಾಡ್ ವಿರುದ್ಧ ಆರೋಪಗಳನ್ನು ರೂಪಿಸುವುದನ್ನು ಮುಂದೂಡುವಂತೆ ಉಚ್ಚ ನ್ಯಾಯಾಲಯವು ಜೂನ್ 9ರಂದು ಕೊಲ್ಲಾಪುರದ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶ ನೀಡಿತ್ತು.
ಮುಂದಿನ ವಿಚಾರಣೆ ಜು.8ಕ್ಕೆ ನಿಗದಿಯಾಗಿದೆ.