ಹೆತ್ತವರಿಂದಲೇ 17ರ ಹರೆಯದ ಬಾಲಕಿಯ ಮರ್ಯಾದಾ ಹತ್ಯೆ

Update: 2016-06-25 14:42 GMT

ಹೈದರಾಬಾದ್,ಜೂ.25: ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ 17ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಹೆತ್ತವರು ಮತ್ತು ಅಜ್ಜಿ ಸೇರಿಕೊಂಡು ಕೊಲೆಗೈದಿದ್ದಾರೆ. ಇದೊಂದು ಮರ್ಯಾದಾ ಹತ್ಯೆ ಪ್ರಕರಣವೆಂದು ಶಂಕಿಸಲಾಗಿದ್ದು, ತಮ್ಮ ಪುತ್ರಿ ಬೇರೊಂದು ಜಾತಿಯ ಯುವಕನೊಂದಿಗೆ ಪರಾರಿಯಾಗಬಹುದು ಎಂಬ ಭೀತಿ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ.

ನೆರಾಡಿಗೊಂಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಸುಕಿನ 3:30ರ ಸುಮಾರಿಗೆ ಲಕ್ಷ್ಮಣ ಸಿಂಗ್ ತನ್ನ ಪತ್ನಿ ಚಂದ್ರಕಲಾ ಮತ್ತು ತಾಯಿ ಪಂಚಾವತಿ ನೆರವಿನಿಂದ ತನ್ನ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಬೇರೆ ಜಾತಿಗೆ ಸೇರಿದ ತನ್ನ ಪ್ರಿಯಕರನನ್ನು ಮನೆಗೆ ಬರುವಂತೆ ಹುಡುಗಿ ಸೂಚಿಸಿದ್ದಳು. ರಾತ್ರಿ ಯುವಕ ಅಲ್ಲಿಗೆ ಹೋದಾಗ ಆತನ ಮತ್ತು ಸಿಂಗ್ ಮಧ್ಯೆ ಜಗಳ ನಡೆದಿತ್ತು.

ಇದರ ಬಳಿಕ ಹುಡುಗಿಯ ಕಥೆ ಮುಗಿಸಲು ಸಿಂಗ್,ಆತನ ಪತ್ನಿ ಮತ್ತು ತಾಯಿ ನಿರ್ಧರಿಸಿದ್ದು,ದುಪಟ್ಟಾದ ನೆರವಿನಿಂದ ತಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹುಡುಗಿಯು ತನ್ನ ಪ್ರಿಯತಮನೊಡನೆ ಪರಾರಿಯಾಗಬಹುದು ಮತ್ತು ಇದು ಸಮಾಜದಲ್ಲಿ ತಮ್ಮ ಮಾನ ಕಳೆಯಬಹುದು ಎಂದು ಕುಟುಂಬವು ಹೆದರಿತ್ತು ಎನ್ನಲಾಗಿದೆ. ಸಿಂಗ್‌ಗೆ ಇನ್ನೂ ಇಬ್ಬರು ಪುತ್ರಿಯರಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News