ಗೋಮಾಂಸ ತಿನ್ನುವವರ ಅಸ್ತಿತ್ವವನ್ನೇ ಇಲ್ಲದಂತೆ ಮಾಡುತ್ತೇವೆ: ತೆಲಂಗಾಣ ಬಿಜೆಪಿ ಶಾಸಕ
ತೆಲಂಗಾಣ,ಜೂನ್ 16: ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಒಂದು ವೇಳೆ ರಾಜ್ಯದಲ್ಲಿ ಗೋಮಾಂಸಕ್ಕೆ ನಿಷೇಧ ಹೇರದಿದ್ದರೆ ಟಿಆರ್ಎಸ್ ಸರಕಾರ ಮತ್ತು ಬೀಫ್ ತಿನ್ನುವವರ ಅಸ್ತಿತ್ವವವನ್ನೇ ಇಲ್ಲದಂತೆ ಮಾಡಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿರುವ ಕಾನೂನು ಬಾಹಿರ ಕಸಾಯಿಖಾನೆಗಳನ್ನು ಸುಟ್ಟುಹಾಕುವ ಬೆದರಿಕೆಯನ್ನೂ ಹಾಕಿದ್ದಾರೆ. "ಅಕ್ಬರುದ್ದೀನ್ ಉವೈಸಿಯಾಗಿರಬಹುದು, ಉವೈಸುದ್ದೀನ್ ಉವೈಸಿಯಾಗಿರಬಹುದು, ಎಂಐಎಂ ಆಗಿರಬಹುದು ಅಥವಾ ಟಿಆರ್ಎಸ್ ಸರಕಾರ ಆಗಿರಬಹುದು ಅವರಿಗೆ ಬೀಫ್ ತಿನ್ನವುದನ್ನು ನಿಲ್ಲಿಸಲು ನಾನು ಹೇಳುತ್ತಿದ್ದೇನೆ.ಮತ್ತು ಕಸಾಯಿಖಾನೆಯನ್ನು ಬಂದ್ಮಾಡಲು ಹೇಳುತ್ತಿದ್ದೇನೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸರಕಾರ ಮತ್ತು ಬೀಫ್ ತಿನ್ನುವವರ ಅಸ್ತಿತ್ವವನ್ನೇ ನಾಶಮಾಡಲಾಗುವುದು ಎಂದು ರಾಜಾ ಸಿಂಗ್ ಹೇಳಿದ್ದಾರೆ.
"ಒಂದು ಕಡೆ ನಮ್ಮ ಮುಖ್ಯಮಂತ್ರಿ (ಕೆ.ಚಂದ್ರಶೇಖರ ರಾವ್) ಗೋವನ್ನು, ಕರುವನ್ನು ಪೂಜಿಸುತ್ತಿದ್ದಾರೆ. ಇನ್ನೊಂದೆಡೆ ಸಚಿವರು ಕಸಾಯಿಖಾನೆಯನ್ನು ಉದ್ಘಾಟಿಸುತ್ತಿದ್ದಾರೆ, ನಾನು ಕಾನೂನುಬಾಹಿರವಾಗಿರುವ ಕಸಾಯಿಖಾನೆ ಹಾಗೂ ಸರಕಾರಿ ಕಸಾಯಿಖಾನೆಯಲ್ಲಿ ನಡೆಯುವ ಗೋವಧೆಯನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಯವರಲ್ಲಿ ವಿನಂತಿಸುತ್ತಿದ್ದೇನೆ. ಒಂದು ವೇಳೆ ಹಾಗೆ ಮಾಡದಿದ್ದರೆ ನಾವು ಕಸಾಯಿಖಾನೆಗೆ ಬೆಂಕಿ ಇಡಲಿದ್ದೇವೆ. ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ಶಾ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗೋಹತ್ಯೆನಿಷೇಧ ಪರವಾಗಿದ್ದಾರೆ. ದುರದೃಷ್ಟವಶಾತ್ ಗೋವಾ ಬಿಜೆಪಿ ಆಳ್ವಿಕೆಯ ರಾಜ್ಯವಾಗಿಯೂ ಅಲ್ಲಿ ಗೋಹತ್ಯೆ ನಿಷೇಧ ತರಲಾಗಿಲ್ಲ. ಇದು ನಾಚಿಕೆಕೇಡು ಎಂದು ಅವರು ಹೇಳಿದ್ದಾರೆ.