ಟಿಕೆಟ್ ಇಲ್ಲದ ತಪ್ಪಿಗೆ ರೈಲಿನಿಂದ ಬಾಲಕನನ್ನು ಹೊರದೂಡಿದ ಟಿಟಿಇ
ಭುವನೇಶ್ವರ, ಜೂ.26: ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 15 ವರ್ಷದ ಬಾಲಕನೊಬ್ಬನನ್ನು ಟಿಕೆಟ್ ಪರೀಕ್ಷಕ (ಟಿಟಿಇ) ರೈಲಿನಿಂದ ಹೊರದಬ್ಬಿದ ಅಮಾನವೀಯ ಘಟನೆ ನಡೆದಿದೆ. ಬಾಲಕ ತೀವ್ರ ಗಾಯಗೊಂಡಿದ್ದಾನೆ. ಚೆನ್ನೈ-ಹೌರಾ ಕೋರಮಂಡಲ ಎಕ್ಸ್ ಪ್ರೆಸ್ ರೈಲ್ನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ. ವಿಶಾಖಪಟ್ಟಣಂನಲ್ಲಿ ರೈಲು ಏರಿದ ಪಿ.ಕೃಷ್ಣ ಎಂಬ ಈ ಬಾಲಕ ಕಟಕ್ಗೆ ಹೋಗುತ್ತಿದ್ದ. ಕಾಯ್ದಿರಿಸಿದ ಎಸ್-10 ಬೋಗಿಗೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಟಿಟಿಇ ಟಿಕೆಟ್ ತಪಾಸಣೆಗೆ ಬಂದಾಗ ಬಾಲಕನಲ್ಲಿ ಟಿಕೆಟ್ ಇರಲಿಲ್ಲ.
‘ನಾನು ಬೋಗಿಯ ಬಾಗಿಲ ಬಳಿ ನಿಂತಿದ್ದೆ. ಟಿಕೆಟ್ ಇಲ್ಲ ಎಂದು ಹೇಳಿದಾಗ ಕೋಪಗೊಂಡ ಟಿಟಿಇ ನನ್ನ ಬಳಿಗೆ ಬಂದು ರೈಲ್ನಿಂದ ತಳ್ಳಿದರು ಎಂದು ಕೃಷ್ಣ ದೂರುತ್ತಾನೆ. ಸರಕಾರಿ ರೈಲ್ವೆ ಪೊಲೀಸರು (ಜಿಆರ್ಎಫ್) ಹಾಗೂ ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬಾಲಕನಿಗೆ ಭುವನೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಕರ್ತವ್ಯದಲ್ಲಿದ್ದ ಟಿಟಿಇಯನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಬಾಲಕನ ಪೋಷಕರಿಗೂ ಮಾಹಿತಿ ನೀಡಲಾಗಿದೆ.