ಪಾಕ್ ಹೈ ಕಮಿಶನರ್ಗೆ ನೀಡಿದ ಆಹ್ವಾನ ವಾಪಸ್
ಹೊಸದಿಲ್ಲಿ,ಜೂ.29: ಎಂಟು ಮಂದಿ ಸಿಆರ್ಪಿಎಫ್ ಜವಾನರನ್ನು ಬಲಿ ತೆಗೆದುಕೊಂಡ ಪಾಂಪೋರ್ ಭಯೋತ್ಪಾದಕ ದಾಳಿ ಘಟನೆ ಬಗ್ಗೆ ಸಂವೇದನಾರಹಿತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಸಹಸಂಘಟನೆ ಆಯೋಜಿಸಿದ ಇಫ್ತಾರ್ ಕೂಟಕ್ಕೆ ಪಾಕಿಸ್ತಾನ ಹೈಕಮಿಶನರ್ಗೆ ಆಹ್ವಾನ ನೀಡದಿರಲು ನಿರ್ಧರಿಸಲಾಗಿದೆ. ಆರೆಸ್ಸೆಸ್ನ ಸಹ ಸಂಘಟನೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್ ಆರಂಭದಲ್ಲಿ ಪಾಕಿಸ್ತಾನ ಹೈಕಮಿಶನರ್ಗೆ ಆಹ್ವಾನ ನೀಡಿತ್ತು. ಆದರೆ ಭಯೋತ್ಪಾದಕ ದಾಳಿ ಬಗ್ಗೆ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಅವರಿಗೆ ಅಧಿಕೃತ ಆಹ್ವಾನ ನೀಡದಿರಲು ನಿರ್ಧರಿಸಲಾಗಿದೆ ಎಂದು ಮಂಚ್ ಸಂಚಾಲಕ ಮುಹಮ್ಮದ್ ಅಫ್ಝಲ್ ಹೇಳಿದ್ದಾರೆ.
ಮುಸ್ಲಿಮ್ ವಿರೋಧಿ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಪ್ರಯತ್ನವಾಗಿ ಅದ್ದೂರಿ ಇಫ್ತಾರ್ ಕೂಟವನ್ನು ಶನಿವಾರ ಸಂಸತ್ ಭವನದಲ್ಲಿ ಏರ್ಪಡಿಸಲಾಗಿದ್ದು, ಇದು ಸಾಮರಸ್ಯದ ಸಂದೇಶ ಪ್ರಸಾರ ಮಾಡುವ ಉದ್ದೇಶ ಹೊಂದಿದೆ. ಪಾಂಪೋರ್ ದಾಳಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಹೈಕಮಿಶನರ್, ರಮಝಾನ್ ಮಾಸದಲ್ಲಿ ಇಫ್ತಾರ್ ಬಗ್ಗೆ ಮಾತನಾಡಬೇಕೆ ವಿನಃ ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.