ಭಾರತ-ಇಸ್ರೇಲ್ ಜಂಟಿ ಸಹಭಾಗಿತ್ವದ ನೆಲದಿಂದ ಗಗನಕ್ಕೆ ಹಾರುವ ಕ್ಷಿಪಣಿ ಪರೀಕ್ಷೆ
ಹೊಸದಿಲ್ಲಿ, ಜೂ.30: ಇಸ್ರೇಲ್ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿರುವ ನೆಲದಿಂದ ಗಗನಕ್ಕೆ ಹಾರುವ ಹೊಸ ಕ್ಷಿಪಣಿಯೊಂದರ ಪರೀಕ್ಷೆಯನ್ನು ಭಾರತವಿಂದು ಒಡಿಶಾ ತೀರದ ರಕ್ಷಣಾ ನೆಲೆಯೊಂದರಲ್ಲಿ ಯಶಸ್ವಿಯಾಗಿ ಮಾಡಿದೆ.
ಈ ಮಾಧ್ಯಮ ವ್ಯಾಪ್ತಿಯ ಕ್ಷಿಪಣಿಯನ್ನು ಇಂದು ಬೆಳಗ್ಗೆ 8:5ರ ವೇಳೆ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಸಂಚಾರಿ ಉಡಾವಕವೊಂದರ ಮೂಲಕ ಯಶಸ್ವಿಯಾಗಿ ಹಾರಿಸಲಾಯಿತೆಂದು ಡಿಆರ್ಡಿಒದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರೀಕ್ಷಾ ಹಾರಾಟವು ಅದ್ಭುತವಾಗಿ ಯಶಸ್ವಿಯಾಗಿದೆ. ಕ್ಷಿಪಣಿಯು ಎಲ್ಲ ಗುರಿಗಳನ್ನು ತಲುಪಿದೆಯೆಂದು ಅವರು ಹೇಳಿದ್ದಾರೆ.
ಬಂಗಾಳ ಕೊಲ್ಲಿಯ ಮೇಲೆ ‘ಬನ್ಶೀ’ ಮಾನವ ರಹಿತ ವಿಮಾನವೊಂದರ ಬೆಂಬಲಿತ, ಆಕಾಶದಲ್ಲಿ ಚಲಿಸುತ್ತಿರುವ ಗುರಿಯನ್ನು ಭೇದಿಸುವಂತೆ ರಾಡಾರ್ಗಳು ಸಂಜ್ಞೆ ಕಳುಹಿಸಿದೊಡನೆಯೇ, ಐಟಿಆರ್ನ 3ನೆ ಉಡಾವಣಾ ವೇದಿಕೆಯಲ್ಲಿರಿಸಲಾಗಿದ್ದ ಕ್ಷಿಪಣಿಯು ಕಾರ್ಯಾಚರಣೆಗೆ ಧುಮುಕಿತೆಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಕ್ಷಿಪಣಿ ಮಾತ್ರವಲ್ಲದೆ, ಪತ್ತೆ, ಹಿಂಬಾಲಿಸುವಿಕೆ ಹಾಗೂ ಕ್ಷಿಪಣಿಗೆ ನಿರ್ದೇಶನ ನೀಡುವುದಕ್ಕಾಗಿ ಬಹುಕಾರ್ಯ ಕಣ್ಗಾವಲು ಹಾಗೂ ಬೆದರಿಕೆ ಎಚ್ಚರಿಕೆ ರಾಡಾರ್ ಇರುತ್ತದೆ.
ಹೈದರಾಬಾದ್ನಲ್ಲಿರುವ ಡಿಆರ್ಡಿಒದ ಪ್ರಯೋಗಾಲಯ-ಭಾರತೀಯ ರಕ್ಷಣಾ ಸಂಶೋಧನೆ ಅಭಿವೃದ್ಧಿ ಪ್ರಯೋಗಾಲದಲ್ಲಿ (ಡಿಆರ್ಡಿಎಲ್), ಇಸ್ರೇಲ್ನ ಏರೋಸ್ಪೇಸ್ ಇಂಡಸ್ಟ್ರೀಸ್ನ (ಐಎಐ) ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿತ್ತು.