ಏರಸೆಲ್-ಮ್ಯಾಕ್ಸಿಸ್ ಪ್ರಕರಣ:ಕಾರ್ತಿ ಚಿದಂಬರಂಗೆ ಸಮನ್ಸ್

Update: 2016-07-05 12:59 GMT

ಹೊಸದಿಲ್ಲಿ,ಜು.5: ಮಲೇಷಿಯಾದ ಮ್ಯಾಕ್ಸಿಸ್ ಕಂಪನಿಗೆ ಭಾರತೀಯ ದೂರಸಂಪರ್ಕ ಸಂಸ್ಥೆ ಏರಸೆಲ್ ಮಾರಾಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸರಕಾರಿ ತನಿಖೆಯ ಅಂಗವಾಗಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲ ಯ(ಇಡಿ)ವು ಆದೇಶಿಸಿದೆ.

ಏರ್‌ಸೆಲ್‌ನ ಮಾರಾಟ ಮತ್ತು ವಿದೇಶಿ ಹೂಡಿಕೆಗೆ ವಿತ್ತ ಸಚಿವಾಲಯವು ಹಸಿರು ನಿಶಾನೆ ತೋರಿಸಿತ್ತು. ಪಿ.ಚಿದಂಬರಂ ಅವರು ಆಗ ವಿತ್ತ ಸಚಿವರಾಗಿದ್ದರು.

ತಾನೀಗ ವಿದೇಶದಲ್ಲಿದ್ದೇನೆ ಮತ್ತು ಕೋರಿರುವ ದಾಖಲೆಗಳನ್ನು ಒಟ್ಟುಗೂಡಿಸಲು ಸಮಯಾವಕಾಶದ ಅಗತ್ಯವಿದೆ ಎಂದು ಕಾರ್ತಿ ತನಿಖಾ ತಂಡಕ್ಕೆ ತಿಳಿಸಿದ್ದಾರೆನ್ನಲಾಗಿದೆ.

 2006ರಲ್ಲಿ ಸಿ.ಶಿವಶಂಕರನ್ ಅವರು ಏರಸೆಲ್‌ನ ಒಡೆತನವನ್ನು ಹೊಂದಿದ್ದರು. ಮಲೇಷಿಯದ ಉದ್ಯಮಿ ಹಾಗೂ ಮ್ಯಾಕ್ಸಿಸ್‌ನ ಮಾಲಕ ಟಿ.ಆನಂದ ಕೃಷ್ಣನ್ ಅವರಿಗೆ ಏರಸೆಲ್‌ನ್ನು ಮಾರಾಟ ಮಾಡುವಂತೆ ಆಗಿನ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಶಿವಶಂಕರನ್ ಆರೋಪಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಮ್ಯಾಕ್ಸಿಸ್ ದಯಾನಿಧಿಯವರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ಸಮೂಹದಲ್ಲಿ 47ಕೋ.ರೂ.ಗಳನ್ನು ತೊಡಗಿಸಿತ್ತು ಎಂದು ಸಿಬಿಐ ಪ್ರತಿಪಾದಿಸಿದೆ. ಮಾರಾಟ ವ್ಯವಹಾರ ಪೂರ್ಣಗೊಂಡನಂತರ ಕಾರ್ತಿ ಚಿದಂಬರಂ ಒಡೆತನದ ಕಂಪನಿಯೊಂದು ಮ್ಯಾಕ್ಸಿಸ್‌ನಿಂದ ಹಣವನ್ನು ಸ್ವೀಕರಿಸಿತ್ತು ಎನ್ನಲಾಗಿದೆ. ಕಾರ್ತಿಗೆ ಸಂಬಂಧಿಸಿದ ಕಂಪನಿಗಳು ಮ್ಯಾಕ್ಸಿಸ್‌ನಿಂದ ಭಾರೀ ಪ್ರಮಾಣದಲ್ಲಿ ಲಂಚ ಪಡೆದುಕೊಂಡಿವೆ ಎಂದು ಆರ್ಥಿಕ ಅಪರಾಧಗಳನ್ನು ಪರಿಶೀಲಿಸುವ ಇಡಿ ಹೇಳಿದೆ. ಏರ್‌ಸೆಲ್-ಮ್ಯಾಕ್ಸಿಸ್ ವ್ಯವಹಾರದಲ್ಲಿ ಸಂದಾಯವಾದ ಲಂಚದ ಹಣದ ಅಕ್ರಮ ವಹಿವಾಟಿಗೆ ಕಾರ್ತಿ ತನ್ನ ಕಂಪನಿಗಳ ಮೂಲಕ ನೆರವಾಗಿದ್ದರೇ ಎನ್ನುವುದನ್ನೂ ಇಡಿ ಪರಿಶೀಲಿಸುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ಕಾರ್ತಿ ಜೊತೆಗೆ ನಂಟು ಹೊಂದಿರುವ ಕಂಪನಿಗಳ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News