ಶಬರಿ ಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ ನೀಡಬಾರದು: ಕೇರಳದ ಪ್ರಸಿದ್ಧ ಕವಯಿತ್ರಿ ಸುಗತಕುಮಾರಿ
ತಿರುವನಂತಪುರಂ,ಜುಲೈ 8: ಶಬರಿ ಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬಾರದೆಂದು ಕವಯಿತ್ರಿ ಸುಗತಕುಮಾರಿ ಹೇಳಿದ್ದಾರೆ. ಈಗಾಗಲೇ ಲಕ್ಷಾಂತರ ಯಾತ್ರಿಕರು ಅಲ್ಲಿಗೆ ಬರುತ್ತಿದ್ದಾರೆ. ಇನ್ನೂ ಮಹಿಳೆಯರೂಅಲ್ಲಿಗೆ ಹೋದರೆ ವಾಸ್ತವ್ಯ ಇತ್ಯಾದಿ ಪರಿಸರಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆ ಉದ್ಭವಿಸಬಹುದು. ತಿರುವಿತಾಂಕೂರ್ ದೇವಸ್ವಂ ಬೋರ್ಡ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಜೊತೆಗೆ ತಾನು ಮಹಿಳೆ ವಿರೋಧಿಯಲ್ಲ. ಆದರೆ ಪ್ರಕೃತಿ ಪ್ರಿಯೆಯಾಗಿದ್ದೇನೆ ಎಂದು ಈ ಸಂದರ್ಭದಲ್ಲಿವಿವರಿಸಿದ್ದಾರೆ.
ಪ್ರಕೃತಿಗಾಗಿ ಇಂತಹ ಒಂದು ನಿಲುವು ಕೈಗೊಳ್ಳಬೇಕಾಗಿದ.ದೇವಸ್ಥಾನಗಳ ಆಚರಣೆಗಳಿಗಾಗಿ ಕೋಟ್ಯಂತರ ರೂಪಾಯಿ ಪೋಲು ಮಾಡುವುದನ್ನು ನಿಲ್ಲಿಸಬೇಕು. ಇಂದು ಆನೆಗಳಿಗೆ ಸಂಬಂಧಿಸಿದ ಆಚರಣೆ ವ್ಯಾಪಾರವಾಗಿ ಮಾರ್ಪಟ್ಟಿದೆ. ದೇವಳಗಳಲ್ಲಿ ಸಿಡಿಮದ್ದು ಬೇಡ ಎಂದ ಶ್ರೀನಾರಾಯಣಗುರು ಮಾತನ್ನು ನಾವು ಮರೆತಿದ್ದೇವೆ. ದೇವಳಗಳಲ್ಲಿ ಸಿಗುವ ವರಮಾನದಲ್ಲಿ ಒಂದು ಪಾಲು ಮಾನವ ಸೇವಾಕಾರ್ಯಗಳಿಗಾಗಿ ಮೀಸಲಿಡಬೇಕು. ನಿರ್ಗತಿಕರಿಗೆ ನಿರಾಶ್ರಿತರಿಗಾಗಿ ಏನಾದರೂ ಮಾಡಲು ಈಗಿನ ಕಾನೂನು ವ್ಯವಸ್ಥೆಯೊಳಗೆಯೇ ಸಾಧ್ಯವಿಲ್ಲವೆಂದಾದರೆ ಅದನ್ನು ಬದಲಿಸಲು ಸಿದ್ಧವಾಗಬೇಕೆಂದು ಸುಗತ ಕುಮಾರಿ ಹೇಳಿದ್ದಾರೆ.