ವೀಡಿಯೋಗಾಗಿ ಉಕ್ಕಿ ಹರಿಯುವ ಗಂಗಾ ನದಿಗೆ ಹಾರಿದ !

Update: 2016-07-08 09:44 GMT

ಡೆಹ್ರಾಡೂನ್, ಜು.8: ತನ್ನ ಸ್ನೇಹಿತರಿಗೆ `ನಾಟಕೀಯ ಕೃತ್ಯ'ವೊಂದರ ವೀಡಿಯೋ ತೆಗೆಯಲು ಸಹಾಯ ಮಾಡುವ ಉದ್ದೇಶದಿಂದ ಹರಿದ್ವಾರ ಸಮೀಪ  ಉಕ್ಕಿ ಹರಿಯುತ್ತಿರುವ ಗಂಗಾ ನದಿಗೆ  ಹಾರಿದ ವ್ಯಕ್ತಿಯೊಬ್ಬ ಇದೀಗ ನಾಪತ್ತೆಯಾಗಿದ್ದಾನೆ. ಆದರೆ ಆತನ ಸಾಹಸಿಕ ಕೃತ್ಯದ ವೀಡಿಯೋ ಮಾತ್ರ ವೈರಲ್ ಆಗಿ ಬಿಟ್ಟಿದೆ. ಮದ್ಯದ ನಶೆಯಲ್ಲಿದ್ದ ಆ ಯುವಕ ಆರಂಭದಲ್ಲಿ  ನದಿಗೆ ಧುಮುಕಲು ಹಿಂಜರಿದಿದ್ದನಾದರೂ ಸ್ನೇಹಿತರ ಒತ್ತಾಸೆ ಮೇರೆಗೆ ಕೊನೆಗೆ ನದಿಗೆ ಹಾರಿದ್ದಾನೆ.

ಈ ದುಸ್ಸಾಹಸಿ ಯುವಕನನ್ನು ಹರಿದ್ವಾರದ ಭದ್ರಾಬಾದ್ ಮೂಲದ ಆಶಿಷ್ ಚೌಹಾಣ್ ಎಂದು ಗುರುತಿಸಲಾಗಿದೆ. ಆಶಿಷ್  ಹಾಗೂ ಆತನ ಸ್ನೇಹಿತರಾದ ಅಶ್ವಿನಿ ಚೌಹಾಣ್ ಹಾಗೂ ಬಲರಾಜ್ ಕುಮಾರ್ ಮಂಗಳವಾರ ಅಪರಾಹ್ನ ನದಿ ತೀರಕ್ಕೆ ಹೋಗಿ ಮದ್ಯ ಸೇವಿಸಿದ ನಂತರ ಈ ಘಟನೆ ನಡೆದಿದೆ. ನೀರಿಗೆ ಹಾರಿದ ಆಶಿಷ್ ಮತ್ತೆ ಮೇಲೆದ್ದು ಬರದೇ ಇದ್ದಾಗ ಕಂಗಾಲಾದ ಆತನ ಸ್ನೇಹಿತರು ಆತನಿಗಾಗಿ ಹುಡುಕಾಡಿದರೂ ವಿಫಲವಾಗಿ ನಂತರ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆತ ಉತ್ತಮ ಈಜು ಪಟುವಾಗಿದ್ದನೆಂದು ಹೇಳಲಾಗುತ್ತಿದೆ. ಆತ ನಾಪತ್ತೆಯಾಗಿದ್ದರೂ ಆತನ ವೀಡಿಯೋ ಮಾತ್ರ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ಸುದ್ದಿಯಾಗುತ್ತಿದೆ.

ಆಶಿಷ್ ಕುಟುಂಬ ಯಾವುದೇ ದೂರು ನೀಡಿಲ್ಲ. ಪೊಲೀಸರಿಗೆ ಬರೆದ ಪತ್ರವೊಂದರಲ್ಲಿ ``ಇದೊಂದು ಅಪಘಾತವಾಗಿದ್ದು ಆತನ ಸಾವಿಗೆ ಯಾರನ್ನೂ ದೂಷಿಸಲು ಬಯಸುವುದಿಲ್ಲ,'' ಎಂದು ಆತನ ಕುಟುಂಬ ಹೇಳಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News