ಐಸಿಸ್ ಉಗ್ರರು ನರಕದ ನಾಯಿಗಳು: ಉವೈಸಿ

Update: 2016-07-09 18:06 GMT

ಹೈದರಾಬಾದ್, ಜು.9: ‘‘ಮದೀನಾದಲ್ಲಿರುವ ಪ್ರವಾದಿಯವರ ಮಸೀದಿ ಸಮೀಪದ ದಾಳಿ ಇಸ್ಲಾಂ ಧರ್ಮದ ವಿರೋಧಿಗಳ ಕೃತ್ಯ. ಇಸ್ಲಾಮಿಕ್ ಸ್ಟೇಟ್ ಉಗ್ರರು ನರಕದ ನಾಯಿಗಳು’’ ಎಂದು ಎಐಎಂಐಎಂ ನಾಯಕ ಅಸಸುದ್ದೀನ್ ಉವೈಸಿ ಹೇಳಿದ್ದಾರೆ.
‘‘ನಿಮಗೆ ನಿಜವಾಗಿಯೂ ಜಿಹಾದ್ ನಡೆಸುವ ಮನಸ್ಸಿದ್ದರೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಡಿ. ಬದಲಾಗಿ ಬಡವರಿಗೆ ಆಹಾರ ನೀಡಿ, ಅಭಿವೃದ್ಧಿಗಾಗಿ ಶ್ರಮಿಸಿ, ಬಡವರ ಹೆಣ್ಣು ಮಕ್ಕಳ ಮದುವೆಗೆ ನೆರವಾಗಿ. ಇದುವೇ ನಿಜವಾದ ಜಿಹಾದ್’’ ಎಂದು ಹೈದರಾಬಾದ್ ಸಂಸದರೂ ಆಗಿರುವ ಉವೈಸಿ ಹೇಳಿದರು.


‘‘ನೀವೆಲ್ಲರೂ ಇಸ್ಲಾಂಗಾಗಿ ಬದುಕಬೇಕು, ಬದಲಾಗಿ ಅದಕ್ಕಾಗಿ ಸಾಯಬಾರದು’’ ಎಂದು ಅವರು ಮುಸ್ಲಿಮ್ ಯುವಕರಿಗೆ ಕರೆ ನೀಡಿದರು. ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಇಸ್ಲಾಂ ವಿರೋಧಿ ಶಕ್ತಿಗಳ ಕೈಯಲ್ಲಿನ ಅಸ್ತ್ರವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು. ತರುವಾಯ ಹಲವಾರು ಮುಸ್ಲಿಂ ಸಂಘಟನೆಯೊಂದರ ಸಭೆಯು ಸೌದಿ ಅರೇಬಿಯ ಮತ್ತಿತರೆಡೆ ಪವಿತ್ರ ರಮಝಾನ್ ತಿಂಗಳಿನಲ್ಲಿ ನಡೆದ ಉಗ್ರ ದಾಳಿಗಳನ್ನು ಖಂಡಿಸಿತು. ‘‘ಇಸ್ಲಾಂ ಹಾಗೂ ಅದರ ಸಿದ್ಧಾಂತಗಳಿಗೂ ಐಸಿಸ್‌ಗೂ ಯಾವುದೇ ಸಂಬಂಧವಿಲ್ಲ. ಇಸ್ಲಾಂ ಧರ್ಮದ ಬೇರಿಗೆ ಹೊಡೆತ ನೀಡಲು ಉಗ್ರ ದಾಳಿಗಳನ್ನು ನಡೆಸಲಾಗುತ್ತಿದೆ. ಮುಸ್ಲಿಮರ ವೇಷದಲ್ಲಿ ಅವರು ಇಸ್ಲಾಂಗೆ ಕೆಟ್ಟ ಹೆಸರು ತರುತ್ತಿದ್ದಾರೆ’’ ಎಂದು ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವೊಂದರಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News