ಎಸ್ಎನ್ಡಿಪಿಯ ವೆಳ್ಳಪಳ್ಳಿ ನಟೇಶನ್ ರಾಜಿನಾಮೆಗೆ ವಿಎಸ್ ಅಚ್ಯುತಾನಂದನ್ ಒತ್ತಾಯ
ತಿರುವನಂತಪುರಂ,ಜುಲೈ 15: ಮೈಕ್ರೊ ಫೈನಾನ್ಸ್ ವಂಚನೆ ಆರೋಪ ಎದುರಿಸುತ್ತಿರುವ ಎಸ್ಎನ್ಡಿಪಿ ಪ್ರಧಾನ ಕಾರ್ಯದರ್ಶಿ ವೆಳ್ಳಪಳ್ಳಿ ನಟೇಶನ್ ವಿರುದ್ಧ ಪ್ರಥಮ ಮಾಹಿತಿ ವರದಿ ಎಫ್ಐಆರ್ ದಾಖಲಾಗಿದ್ದು ಅವರು ಕೂಡಲೇ ರಾಜಿನಾಮೆ ನೀಡಿ ತನಿಖೆ ಸಹಕರಿಸಬೇಕೆಂದು ಕೇರಳದ ಸಿಪಿಎಂ ಹಿರಿಯ ನಾಯಕ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆ. ತನ್ನನ್ನು ಸಮರ್ಥಿಸಿಕೊಳ್ಳುವುದು, ವಿತಂಡವಾದ ಹೂಡಿ ಸ್ವಯಂ ಅಪಹಾಸ್ಯಕ್ಕೀಡಾಗುವ ಬದಲು ಕೇಸು ಸುಸೂತ್ರವಾಗಿ ಮುಂದುವರಿಯಲಿಕ್ಕಾಗಿ ಎಸ್ಎನ್ಡಿಪಿ ಸಭೆಗೆ ರಾಜಿನಾಮೆ ಕೊಟ್ಟುಆರ್ಥಿಕ ವಂಚನೆಗೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟಿನಲ್ಲಿ ಹಾಜರು ಪಡಿಸಲಿ ಎಂದು ನಟೇಶನ್ಗೆ ವಿಎಸ್ ಅಚ್ಯುತಾನಂದನ್ ಸವಾಲೆಸೆದಿದ್ದಾರೆಂದು ವರದಿಯಾಗಿದೆ.
ಈಳವ ಸಮುದಾಯದ ಬಡಮಹಿಳೆಯರಿಗೆ ಹಿಂದುಳಿದ ಸಮುದಾಯದ ಕಾರ್ಪೊರೇಷನ್ ಹಾಗೂ ವಿವಿಧ ಬ್ಯಾಂಕ್ಗಳಿಂದ 2% ಬಡ್ಡಿಗೆ ಸಾಲಪಡೆದು ಅದನ್ನು ಈ ಮಹಿಳೆಯರಿಗೆ 12%,15% ಹೆಚ್ಚು ಬಡ್ಡಿಗೆ ಸಾಲನೀಡಿರುವ ಆರೋಪವನ್ನು ನಟೇಶನ್ ಎದುರಿಸುತ್ತಿದ್ದಾರೆ. ಹೀಗೆ ಪಡೆದ ಸಾಲವನ್ನು 5% ಕ್ಕಿಂತ ಹೆಚ್ಚು ಬಡ್ಡಿಗೆ ನೀಡುವುದು ಕಾನೂನುಬಾಹಿರವಾಗಿದ್ದು ನಟೇಶನ್ ವಿರುದ್ಧ ಹೆಚ್ಚು ಬಡ್ಡಿ ಪಡೆದು ಭ್ರಷ್ಟಾಚಾರವೆಸಗಿದ್ದಾರೆಂದು ಕೇಸು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಂಚನೆ ಆರೋಪದ ಪ್ರಥಮ ಆರೋಪಿಯೇ ಎಸ್ಎನ್ಡಿಪಿ ಸಭೆಯ ಪ್ರಧಾನಕಾರ್ಯದರ್ಶಿಯಾಗಿದ್ದು ಅವರು ಆ ಸ್ಥಾನದಲ್ಲಿ ಮುಂದುವರಿಯುವುದು ಆ ಸಭೆಗೆ ಅಪಮಾನಕರ ಎಂದು ವಿಎಸ್ ಟೀಕಿಸಿದ್ದಾರೆ. ನಟೇಶನ್ ಸ್ಥಾನಕ್ಕೆ ರಾಜಿನಾಮೆ ನೀಡಿ ನಿರಪರಾಧಿ ಎಂದು ಸಾಬೀತು ಪಡಿಸಬೇಕು ಎಂದು ಅಚ್ಯುತಾನಂದನ್ ಹೇಳಿದ್ದಾರೆಂದು ವರದಿ ತಿಳಿಸಿದೆ.