ಈ ವರ್ಷ ಭಾರತಕ್ಕೆ ಹಿಂದಿರುಗುವುದಿಲ್ಲ : ಝಾಕಿರ್ ನಾಯ್ಕ್
ಮುಂಬೈ,ಜು.15: ವಿದ್ವಾಂಸ ಡಾ. ಝಾಕಿರ್ ನಾಯ್ಕ್ ಅವರು ತಾನು ಈ ವರ್ಷ ಭಾರತಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ.
ಮುಂಬೈ ನಿವಾಸಿಯಾಗಿದ್ದು ಪ್ರಸ್ತುತ ಸೌದಿ ಅರೇಬಿಯದಲ್ಲಿರುವ 50ರ ಹರೆಯದ ನಾಯ್ಕ್ ಇಂದು ಬೆಳಗ್ಗೆ ಇಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸ್ಕೈಪ್ ಮೂಲಕ ಮಾತನಾಡಿ,ತಾನು ಓಡಿ ಹೋಗುತ್ತಿಲ್ಲ ಎಂದು ಹೇಳಿದರು. ಈ ವರ್ಷದ ಹೆಚ್ಚಿನ ಸಮಯವನ್ನು ವಿದೇಶಗಳಲ್ಲಿಯೇ ಕಳೆಯಲು ತಾನು ಮೊದಲೇ ಬಯಸಿದ್ದೆ ಎಂದ ಅವರು, ಈ ವರೆಗೆ ಯಾವುದೇ ಭಾರತೀಯ ಅಧಿಕಾರಿ ಅಥವಾ ತನಿಖಾ ಸಂಸ್ಥೆ ತನ್ನನ್ನು ಸಂಪರ್ಕಿಸಿಲ್ಲ ಎಂದು ಒತ್ತಿ ಹೇಳಿದರು.
ಈ ತಿಂಗಳ ಆರಂಭದಲ್ಲಿ 20 ಜೀವಗಳನ್ನು ಬಲಿ ತೆಗೆದುಕೊಂಡ ಢಾಕಾ ರೆಸ್ಟೋರೆಂಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಲ್ಲೋರ್ವ ಝಾಕಿರ್ ನಾಯ್ಕರಿಂದ ಸ್ಫೂರ್ತಿ ಪಡೆದಿದ್ದ ಎಂದು ಬಾಂಗ್ಲಾದೇಶವು ಆರೋಪಿಸಿದೆ. ಇದೇ ವೇಳೆ ಅವರ ಭಾಷಣಗಳು ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದವೆಯೇ ಅಥವಾ ಸಮರ್ಥಿಸಿದ್ದವೇ ಎನ್ನುವುದರ ಕುರಿತು ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳು ತನಿಖೆ ನಡೆಸುತ್ತಿವೆ. ದಾಳಿಯ ನಂತರ ಭಾರತದಲ್ಲಿ ಝಾಕಿರ್ ನಾಯ್ಕ್ ರ ಪೀಸ್ ಟಿವಿ ಪ್ರಸಾರವನ್ನು ನಿಷೇಧಿಸಲಾಗಿದೆ.