ಮಾಯಾವತಿ ‘ಅವನೋ ಅಥವಾ ಆಕೆಯೋ’ ಎಂದು ಕೇಳೀದ್ದ ಬಿಜೆಪಿ ನಾಯಕಿ
ಹೊಸದಿಲ್ಲಿ, ಜು.22: ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ‘ಅವನೋ ಅಥವಾ ಆಕೆಯೋ’ ಎಂಬ ಗೊಂದಲ ತನಗಿದೆ ಎಂದು ಬಿಜೆಪಿಯ ವಿವಾದಿತ ವಕ್ತಾರೆ ಶೈನಾ.ಎನ್.ಸಿ 2014ರಲ್ಲಿ ನೀಡಿದ್ದಾರೆನ್ನಲಾದ ಹೇಳಿಕೆ ಈಗ ಮತ್ತೆ ಸುದ್ದಿಯಲ್ಲಿದೆ. ಗುಜರಾತ್ ದಲಿತರ ಪ್ರತಿಭಟನೆಯ ಕಾವು ಇನ್ನೂ ಆರದೇ ಇರುವಾಗ ಸಾಮಾಜಿಕ ಜಾಲತಾಣ ಪ್ರಿಯರು ಶೈನಾ ಅವರ ಹಳೆಯ ಹೇಳಿಕೆಯನ್ನು ಪೋಸ್ಟ್ ಮಾಡಿ ಬಿಜೆಪಿಯನ್ನು ಮತ್ತಷ್ಟು ಕಾಡಿಸಿದ್ದಾರೆ.
ಜೈಪುರದಲ್ಲಿ ನಡೆದ ಎಂಟ್ರಪ್ರನರ್ಸ್ ಆರ್ಗನೈಝೇಶನ್ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ಶೈನಾ ಮೇಲಿನ ಹೇಳಿಕೆ ನೀಡಿದ್ದರೆಂದು ಹೇಳಲಾಗಿದೆ. ಈ ಹೇಳಿಕೆ ನೀಡಿದ ಬೆನ್ನಲ್ಲೇ ಮುಂಬೈ ಮೂಲದ ಬಿಜೆಪಿ ವಕ್ತಾರೆ ಮಹಿಳಾ ಹಕ್ಕು ಕಾರ್ಯಕರ್ತೆಯರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.
ಇದೀಗ ಸಾಮಾಜಿಕ ಜಾಲತಾಣ ಪ್ರಿಯರು ಈ ವಿಚಾರವನ್ನು ಮತ್ತಷ್ಟು ಕೆದಕಿರುವುದು ಹಲವರಿಗೆ ಅಸಮಾಧಾನ ತಂದಿದೆ.
ತರುವಾಯ ಉತ್ತರಪ್ರದೇಶದ ಲಕ್ನೌನಲ್ಲಿ ಸಾವಿರಾರು ದಲಿತರು ಬೀದಿಗಿಳಿದು ಉಚ್ಚಾಟಿತ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರು ನೀಡಿದ ‘ವೇಶ್ಯೆ’ ಹೇಳಿಕೆಯನ್ನು ಖಂಡಿಸಿದರು.
ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಲಪಂಥೀಯ ಕಾರ್ಯಕರ್ತರಿಂದ ಹಲ್ಲೆಗೊಳಗಾದವರ ಕುಟುಂಬಗಳನ್ನು ಭೇಟಿಯಾದರು. ಎಎಪಿ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಅವರನ್ನು ಇಂದು ಭೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ.