ಅಸ್ಸಾಂನಲ್ಲಿ ಭಾರೀ ನೆರೆ: 3 ಲಕ್ಷ ಜನರು ನಿರಾಶ್ರಿತ
ಗುವಾಹತಿ, ಜು.22: ಅಸ್ಸಾಂನಲ್ಲಿ ಭಾರೀ ಮಳೆ ಹಾಗೂ ನೆರೆಯಿಂದಾಗಿ ಶುಕ್ರವಾರ ಹೆಚ್ಚು ಜಿಲ್ಲೆಗಳು ಮುಳುಗಡೆಯಾಗಿವೆ. ಮೂರು ಲಕ್ಷದಷ್ಟು ಜನರು ನಿರಾಶ್ರಿತರಾಗಿದ್ದಾರೆ. ಚಿರಂಗ್ ಜಿಲ್ಲೆಯಲ್ಲಿ ಸೇನೆಯು ರಕ್ಷಣಾ ಕಾರ್ಯಾಚರಣೆಗೆ ಧುಮುಕಿದೆ.
ಗುರುವಾರ 7 ಜಿಲ್ಲೆಗಳನ್ನು ಮುಳುಗಿಸಿದ್ದ ನೆರೆ, ಶುಕ್ರವಾರ ಮತ್ತೆರಡು ಜಿಲ್ಲೆಗಳನ್ನು ನುಂಗಿದೆಯೆಂದು ಅಸ್ಸಾಂನ ಪ್ರಕೃತಿ ವಿಕೋಪ ಪ್ರಬಂಧನ ಪ್ರಾಧಿಕಾರ ತಿಳಿಸಿದೆ.
ಲಖಿಂಪುರ್, ಗೋಲಾಘಾಟ್, ಮೊರಿಗಾಂವ್, ಜೋರ್ಹಲ್, ಧೇಮಾಜಿ, ಶಿವಸಾಗರ, ಕೊಖ್ರಝಾರ್, ಬಾರ್ಪೇಟ ಹಾಗೂ ಬೊಂಗಾಯಿಗಾಂವ್ಗಳು ಬಾಧಿತ ಜಿಲ್ಲೆಗಳಾಗಿದ್ದು, 464 ಗ್ರಾಮಗಳ ಅಂದಾಜು 3 ಲಕ್ಷ ಜನರು ನೆರೆಯಿಂದ ಬಾಧಿತರಾಗಿದ್ದಾರೆ.
ಬ್ರಹ್ಮಪುತ್ರಾ ಹಾಗೂ ಅದರ ಉಪನದಿಗಳು ದಡ ಮೀರಿ ರಸ್ತೆಗಳಲ್ಲಿ ಹರಿಯುತ್ತಿವೆ. ಇದರಿಂದಾಗಿ ಅನೇಕ ಪ್ರದೇಶಗಳಲ್ಲಿ ಸಂಪರ್ಕ ಕಡಿತವಾಗಿದೆ. ಸುಮಾರು 25 ಸಾವಿರ ಹೆಕ್ಟೇರ್ಗಳಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಗೊಂಡಿದೆ.
ಚಿರಂಗ್ನಲ್ಲಿ ಸೇನೆ ನೆರೆಯಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿದೆ.