ಪಂಜಾಬ್ : ಮುಸ್ಲಿಮರ ಮೇಲೆ ದಾಳಿಗೆ ಬಂದ ಶಿವಸೈನಿಕರ ವಿರುದ್ಧ ಖಡ್ಗ ಝಳಪಿಸಿದ ಸಿಖ್ಖರು

Update: 2016-07-24 03:22 GMT

ಅಮೃತಸರ, ಜು.24: ಶಿವಸೇನೆ ಸೈನಿಕರು ಮತ್ತು ಮುಸ್ಲಿಮರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಏಳು ಮಂದಿ ಸಾವಿಗೀಡಾದ ಘಟನೆ ಪಂಜಾಬ್‌ನ ಪಗ್ವಾರದಲ್ಲಿ ನಡೆದಿದೆ.

ಶಿವಸೇನೆ ಕಾರ್ಯಕರ್ತರು ಸ್ಥಳೀಯ ಮುಸ್ಲಿಮರ ಮೇಲೆ ದಾಳಿಗೆ ಮುಂದಾದಾಗ, ಸ್ಥಳೀಯ ಸಿಕ್ಖ್ ಸಮುದಾಯ ಮುಸ್ಲಿಮರ ಬೆಂಬಲಕ್ಕೆ ನಿಂತಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ತಡೆ ಒಡ್ಡಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆ ವೇಳೆ ಕೆಲ ಶಿವಸೈನಿಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಮುಸ್ಲಿಮರಿಗೆ ಧಮ್ಕಿ ಹಾಕಿದ್ದರು. ಇಂಥ ಗೂಂಡಾಗಿರಿ ಖಂಡಿಸಿ, ಶುಕ್ರವಾರ ಪ್ರಾರ್ಥನೆ ಬಳಿಕ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಲು ಮುಸ್ಲಿಮರು ಮುಂದಾದರು.

ಈ ವೇಳೆಗೆ ಮಸೀದಿಗಳ ಎದುರು ಶಿವಸೈನಿಕರು ಜಮಾಯಿಸಿ, ತಮ್ಮನ್ನು ಎದುರಿಸುವಂತೆ ಸವಾಲು ಹಾಕಿದರು ಎನ್ನಲಾಗಿದೆ. ಈ ಹಂತದಲ್ಲಿ ಸ್ಥಳೀಯ ಸಿಖ್ಖರು ಮುಸ್ಲಿಮರಿಗೆ ಬೆಂಬಲವಾಗಿ ಬಂದು, ಖಡ್ಗ ಝಳಪಿಸಿದರು. ಸಂಘರ್ಷ ಆರಂಭವಾಗಿ 25 ನಿಮಿಷಗಳ ಬಳಿಕ ಪೊಲೀಸರು ಆಗಮಿಸಿದರು. ಪೊಲೀಸರ ವಿಳಂಬ ವಿರುದ್ಧವೂ ಮುಸ್ಲಿಮರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News