ಸಿಬಿಐನಿಂದ ಕೆಂಪಯ್ಯ-ಡಿಜಿಪಿ ವಿಚಾರಣೆ
ದೆಹಲಿ/ಬೆಂಗಳೂರು, ಆ.5: ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆಗೊಳಪಡಿಸಿತು.
ನವದೆಹಲಿಯ ಕೇಂದ್ರೀಯ ತನಿಖಾ ದಳ(ಸಿಬಿಐ)ದ ಮುಖ್ಯ ಕಚೇರಿಯಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೂ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಒಂದಂಕಿ ಲಾಟರಿ ಹಗರಣದಲ್ಲಿ ಆರೋಪ ಹೊತ್ತ ಅಧಿಕಾರಿಗಳು ವಿಚಾರಣೆ ಸಂದರ್ಭದಲ್ಲಿ ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರು ಹೆಸರು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿ ಈ ಇಬ್ಬರು ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿತ್ತು ಎಂದು ಗೊತ್ತಾಗಿದೆ.
ಒಂದಂಕಿ ಲಾಟರಿ ಹಗರಣದ ಪ್ರಮುಖ ರೂವಾರಿ ಪಾರಿರಾಜನ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಡಿಜಿಪಿ ಸುನಿಲ್ಕುಮಾರ್, ಹರಿಶೇಖರನ್, ಅರುಣ್ಚಕ್ರವರ್ತಿ ಸೇರಿ 35ಕ್ಕೂ ಹೆಚ್ಚು ಅಧಿಕಾರಿಗಳ ವಿಚಾರಣೆ ಈಗಾಗಲೇ ನಡೆಸಲಾಗಿದೆ. ಅಲ್ಲದೆ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ಕುಮಾರ್ ಅವರನ್ನು ಸರಕಾರ ಅಮಾನತು ಮಾಡಿತ್ತು.
ಇದೀಗ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದ್ದು, ಹಗರಣದಲ್ಲಿ ಕೆಂಪಯ್ಯ ಹಾಗೂ ಓಂಪ್ರಕಾಶ್ ಹೆಸರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ