ದಲಿತ ವಿಷಯಗಳಿಂದ ಗಮನ ಬೇರೆಡೆಗೆ ಸೆಳೆಯಲು ಆನಂದಿಬೆನ್ ರಾಜೀನಾಮೆ
ಅಹ್ಮದಾಬಾದ್, ಆ.5: ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ರಾಜೀನಾಮೆ, ದಲಿತ ವಿಷಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಟೀಕಿಸಿದ್ದಾರೆ.
ಅಹ್ಮದಾಬಾದ್ನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಬಿಜೆಪಿಯ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಅವರ ಕ್ರಮ, ದೊಡ್ಡ ಪಿತೂರಿಯ ಒಂದು ಭಾಗ ಎಂದು ದೂರಿದರು. ಉನಾಗೆ ಭೇಟಿ ನೀಡದಂತೆ ತಡೆಯುವ ಸಲುವಾಗಿ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಈ ತಂತ್ರ ಹೂಡಲಾಗಿತ್ತು ಎಂದು ಆಪಾದಿಸಿದರು. ಮಾಯಾವತಿ ಈ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಉನಾ ಘಟನೆಯಲ್ಲಿ ಗಾಯಗೊಂಡು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್, ರಮೇಶ್, ಬೆಚಾರ್ ಹಾಗೂ ವಶ್ರಾಂ ಅವರನ್ನು ಮಾಯಾವತಿ ಭೇಟಿ ಮಾಡಿದರು. ನಿಮ್ಮ ಅಕ್ಕನಾಗಿ ಭೇಟಿ ಮಾಡುತ್ತಿದ್ದೇನೆಯೇ ವಿನಃ ರಾಜಕಾರಣಿಯಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ ಮಾಯಾವತಿ, ಎಲ್ಲ ಗಾಯಾಳುಗಳಿಗೆ ತಲಾ ಎರಡು ಲಕ್ಷ ರೂ. ನೆರವು ಘೋಷಿಸಿದರು.