ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯದಿಂದ ಸಮನ್ಸ್
Update: 2016-08-07 06:37 GMT
ಹೊಸದಿಲ್ಲಿ, ಆ.7: ಅಸ್ಸಾಂನ 16 ನೇ ಶತಮಾನದ ವೈಷ್ಣವ ಸನ್ಯಾಸಿಗಳ ಸತ್ರ ಪ್ರವೇಶಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಯವು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಪ್ರಧಾನ ನ್ಯಾಯಾಧೀಶ ಸಂಜಯ್ ಹಝಾರಿಕಾ ಅವರು ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಡಿಸೆಂಬರ್ 12, 2015 ರಂದು 16 ನೇ ಶತಮಾನದ ವೈಷ್ಣವ ಸನ್ಯಾಸಿಗಳ ಸತ್ರ ಪ್ರವೇಶ ತಡೆದ ಪ್ರಕರಣದಲ್ಲಿ ಆರ್ ಎಸ್ಎಸ್ ಶಾಮೀಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಆರ್ ಎಸ್ಎಸ್ ನ ಇಮೇಜ್ ಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಆರ್ ಎಸ್ ಎಸ್ ಕಾರ್ಯಕರ್ತ ಅಂಜನ್ ಬೋರಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.