ಜಿಎಸ್ಟಿ: ಕಾಂಗ್ರೆಸ್ ವಿಪ್
ಹೊಸದಿಲ್ಲಿ, ಆ.7: ಸೋಮವಾರ ಲೋಕಸಭೆಯಲ್ಲಿ ಜಿಎಸ್ಟಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಸಂಸದರು ಹಾಜರಿರುವಂತೆ ಎಲ್ಲ ಸದಸ್ಯರಿಗೆ ವಿಪ್ ನೀಡಲಾಗಿದೆ ಎಂದು ಕಾಂಗ್ರೆಸ್ನ ಮುಖ್ಯ ಸಚೇತಕ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಈಗಾಗಲೇ ಮಸೂದೆಗೆ ಬೆಂಬಲ ಸೂಚಿಸಿದೆ. ಆದರೆ ಸರಕಾರ ವಿಧಿಸಬಹುದಾದ ಗರಿಷ್ಠ ಪ್ರಮಾಣದ ತೆರಿಗೆಯನ್ನು ನಿರ್ಧರಿಸಬೇಕಿರುವುದರಿಂದ ಇದು ಮುಖ್ಯ ಎಂದು ಅವರು ಹೇಳಿದರು.ಸಂವಿಧಾನ ತಿದ್ದುಪಡಿ ಮಸೂದೆಯನ್ನು ನಾವು ಬೆಂಬಲಿಸುತ್ತೇವೆ. ಜಿಎಸ್ಟಿ ದೇಶಕ್ಕೆ ಮುಖ್ಯವಾಗಿರುವುದರಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಆಡಳಿತ ಪಕ್ಷ ಭರವಸೆ ನೀಡಿರುವ ತಿದ್ದುಪಡಿಗಳಿಗೆ ಅನುಗುಣವಾಗಿ ಮಸೂದೆ ಬೆಂಬಲಿಸುತ್ತೇವೆ ಎಂದು ಸಿಂಧಿಯಾ ವಿವರಿಸಿದರು.
ಜಿಎಸ್ಟಿಯ ಪರಿಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು. ದೇಶಾದ್ಯಂತ ಸಮಾನ ತೆರಿಗೆ ವಿಧಿಸುವ ಪ್ರಸ್ತಾವವನ್ನು ನಮ್ಮ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಬಜೆಟ್ ಭಾಷಣದಲ್ಲಿ ಹೇಳಿದ್ದರು ಎಂದು ಸಿಂಧಿಯಾ ಹೇಳಿದರು.