ಹುತಾತ್ಮ ಸೈನಿಕನ ಕುಟುಂಬದಿಂದ 20 ಲಕ್ಷ ರೂ. ಚೆಕ್ ತಿರಸ್ಕಾರ
ಬುಲಂದರ್ಶಹರ್(ಉ.ಪ್ರ.) ಆ.8: ಕಾಶ್ಮೀರದಲ್ಲಿ ಗಡಿ ನುಸುಳುವಿಕೆ ಯತ್ನವೊಂದನ್ನು ತಡೆಯುವ ವೇಳೆ ಹುತಾತ್ಮನಾಗಿರುವ ಯೋಧನೊಬ್ಬನ ಕುಟುಂಬವು, ಉತ್ತರಪ್ರದೇಶ ಸರಕಾರ ಘೋಷಿಸಿರುವ ರೂ.20 ಲಕ್ಷ ಪರಿಹಾರವನ್ನು ಸ್ವೀಕರಿಸಲು ನಿರಾಕರಿಸಿದೆ. ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಾಂವ್ ವಲಯದಲ್ಲಿ ನಡೆದಿದ್ದ ಸೇನಾ ಕಾರ್ಯಾಚರಣೆಯ ವೇಳೆ, ಇಲ್ಲಿನ ರಾಂಡಾ ಗ್ರಾಮದ ನಿವಾಸಿಯಾಗಿದ್ದ 28ರ ಹರೆಯದ ವಿಶಾಲ್ ಚೌಧರಿ ಸಹಿತ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಚೌಧರಿಯವರ ಅಂತ್ಯ ಸಂಸ್ಕಾರದ ಬಳಿಕ ನಿನ್ನೆ ಚೆಕ್ಕನ್ನು ಅಲ್ಲಿಗೆ ಕಳುಹಿಸಲಾಗಿತ್ತೆಂದು ಕುಟುಂಬ ತಿಳಿಸಿದೆ. ಪರಿಹಾರ ಮೊತ್ತವನ್ನು ರೂ. 50 ಲಕ್ಷಕ್ಕೇರಿಸಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರ ಉದ್ಯೋಗ ನೀಡಬೇಕೆಂಬುದು ಅವರ ಬೇಡಿಕೆಯಾಗಿದೆ. ಮೃತ ಯೋಧನ ಪತ್ನಿಗೆ ಪೆಟ್ರೋಲ್ ಪಂಪ್ ಅಥವಾ ಅಡುಗೆ ಅನಿಲ ಏಜೆನ್ಸಿಯನ್ನು ಮಂಜೂರು ಮಾಡುವಂತೆಯೂ ಕುಟುಂಬ ಆಗ್ರಹಿಸಿದೆ.
ಆದಾಗ್ಯೂ, ಕುಟುಂಬದ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ತಿಳಿಸುತ್ತೇನೆಂದು ಭರವಸೆ ನೀಡಿದ ಬಳಿಕ ಅದು ಚೆಕ್ ಸ್ವೀಕರಿಸಿದೆಯೆಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅರವಿಂದ ಪಾಂಡೆ ತಿಳಿಸಿದ್ದಾರೆ.