ಪತ್ನಿಯನ್ನು ಕಾರಿನಲ್ಲಿ ಕುಳ್ಳಿರಿಸಿ ಬೆಂಕಿಯಿಟ್ಟು ಕೊಂದ ಟ್ಯಾಕ್ಸಿ ಚಾಲಕ

Update: 2016-08-09 07:20 GMT

ಚೆನ್ನೈ, ಆ.9: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಕೋಪಗೊಂಡಿದ್ದ ಟ್ಯಾಕ್ಸಿ ಚಾಲಕನೊಬ್ಬ ಹಾಡಹಗಲೇ ಪತ್ನಿಯನ್ನು ಕಾರಿನೊಳಗೆ ಕುಳ್ಳಿರಿಸಿ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ಚೆನ್ನೈಯಿಂದ ವರದಿಯಾಗಿದೆ. ಚೆನ್ನೈನ ನಂದನಂ ಎಂಬಲ್ಲಿ ಚೆಂಗಲ್‌ಪೇಟ್ ನಿವಾಸಿಯಾದ ನಾಗರಾಜ್ ಎಂಬಾತ ತನ್ನ ಪತ್ನಿ ಎನ್. ಪ್ರೇಮಾ (28) ಎಂಬಾಕೆಯನ್ನು ಕಾರಿನೊಳಗೆ ಕುಳ್ಳಿರಿಸಿ ಬೆಂಕಿಯಿಟ್ಟು ಕೊಂದು ಹಾಕಿದ ಆರೋಪಿ ಎನ್ನಲಾಗಿದೆ. ಮೃತಳಾಗುವ ಮೊದಲು ಮಹಿಳೆ ನೀಡಿದ ಹೇಳಿಕೆ ಪ್ರಕಾರ ಪತಿನಾಗರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಸುಟ್ಟಗಾಯಗಳಾಗಿರುವ ಇಬ್ಬರು ಮಕ್ಳಳು, ನಿಶಾಂತ್ ರಾಜ್(4), ಯಶ್ವಂತ್ ರಾಜ್(2)ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐದು ವರ್ಷಗಳ ಹಿಂದೆ ನಾಗರಾಜ್- ಪ್ರೇಮಾ ವಿವಾಹಿತರಾಗಿದ್ದು,ಪ್ರತಿನಿತ್ಯ ಮನೆಯಲ್ಲಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ಪ್ರೇಮಾಳ ಸಹೋದರಿಯ ಗಂಡನ ಮಾಲಕತ್ವದ ಕಾರನ್ನು ನಾಗರಾಜ್ ಚಲಾಯಿಸುತ್ತಿದ್ದ. ಓಲಾಕಂಪೆನಿಯೊಂದಿಗೆ ಕಾರನ್ನು ನೋಂದಾಯಿಸಲಾಗಿತ್ತು. ಕೊಲ್ಲುವ ದುರುದ್ದೇಶದಿಂದ ಪತ್ನಿಮಕ್ಕಳನ್ನು ನಾಗರಾಜ್ ಕಾರಿನಲ್ಲಿ ಕರೆತಂದಿದ್ದ. ಈ ಪ್ರಯಾಣದ ನಡುವೆ ದಂಪತಿ ನಡುವೆ ಮತ್ತೆ ವಾಗ್ವಾದ ಆರಂಭವಾಗಿತ್ತು. ಕಾರನ್ನು ನಿಲ್ಲಿಸಿ ಕೆಳಗಿಳಿದ ನಾಗರಾಜ್ ಪ್ರೇಮಾ ಕುಳಿತಿದ್ದ ಸೀಟಿನ ಪಕ್ಕದಲ್ಲಿ ಇರಿಸಿದ್ದ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ಹಚ್ಚಿ ಓಡಿ ಪರಾರಿಯಾಗಿದ್ದ. ಕಾರು ಉರಿಯುತ್ತಿರುವುದನ್ನು ಕಂಡ ಊರವರು ಕಾರಿನೊಳಗಿದ್ದ ಮಕ್ಕಳಿಬ್ಬರನ್ನು ರಕ್ಷಿಸಿದ್ದಾರೆ ಎಂದು ವರದಿ ತಿಳಿಸಿದೆ.

  ಸೈದಾನ್‌ಪೇಟೆ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ ಬಳಿಕ ಕಾರಿನೊಳಗೆ ಪ್ರೇಮಾ ಇರುವುದು ಗೊತ್ತಾಗಿತ್ತು. ಗಂಭೀರ ಸುಟ್ಟಗಾಯಗಳಾಗಿದ್ದ ಆಕೆಯನ್ನು ತಕ್ಷಣ ಕಿಲ್ಪಾಕ್ ಮೆಡಿಕಲ್ ಕಾಲೆಜು ಆಸ್ಪತ್ರೆಗೆ ಸೇರಿಸಲಾಯಿತಾದರೂ ಕೆಲವೇ ಗಂಟೆಗಳಲ್ಲಿ ಪ್ರೇಮಾ ಇಹಲೋಕ ತ್ಯಜಿಸಿದ್ದಾಳೆ. ಈ ನಡುವೆ ಪೊಲೀಸರಿಗೆ ಪ್ರೇಮಾ ತನ್ನ ಪತಿ ನಾಗರಾಜ್ ಬೆಂಕಿಹಚ್ಚಿದ್ದೆಂದು ತಿಳಿಸಿದ್ದಾಳೆ. ಮಕ್ಕಳಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಪತಿ ನಾಗರಾಜ್‌ನನ್ನು ಬಂಧಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News