ದೇವಸ್ಥಾನವನ್ನು ಪ್ರವೇಶಿಸಿದ್ದ ಮಾನಸಿಕ ಅಸ್ವಸ್ಥೆಗೆ ಥಳಿತ

Update: 2016-08-13 16:33 GMT

ಕೇಂದ್ರಪಾಡಾ(ಒಡಿಶಾ),ಆ.13: ಇಲ್ಲಿಯ ಬಡಾ ಮಂಗಳಾ ಬಡಾವಣೆಯಲ್ಲಿ ದೇವಸ್ಥಾನವನ್ನು ಪ್ರವೇಶಿಸಿದ್ದ ವಯಸ್ಸಾದ ಮಾನಸಿಕ ಅಸ್ವಸ್ಥೆಯನ್ನು ಸ್ಥಳೀಯ ಯುವಕರನ್ನೊಳಗೊಂಡ ಗುಂಪೊಂದು ಎರಡೂ ಕೈಗಳನ್ನು ಕಟ್ಟಿ ಹಾಕಿ ಬರ್ಬರವಾಗಿ ಥಳಿಸಿದೆ. ಸಕಾಲದಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಮಾನಸಿಕ ಅಸ್ವಸ್ಥ ಮಹಿಳೆಯ ಮೇಲಿನ ಈ ಹಲ್ಲೆಗೆ ಸಮಾಜದ ವಿವಿಧ ವರ್ಗಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
 ಮಹಿಳೆಯು ಬಡಾ ಮಂಗಳಾ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿ ದೇವರ ವಿಗ್ರಹವನ್ನು ಕೈಯಿಂದ ಸ್ಪರ್ಶಿಸಿದ್ದಳು. ಇದರಿಂದಾಗಿ ದೇಗುಲವು ಅಪವಿತ್ರಗೊಂಡಿದೆ ಎಂದು ಬಲವಾಗಿ ನಂಬಿದ್ದ ಸ್ಥಳೀಯರು ಸುಮಾರು 15 ನಿಮಿಷಗಳ ಕಾಲ ಬಿಟ್ಟೂಬಿಡದೆ ಆಕೆಯನ್ನು ಥಳಿಸಿದ್ದಾರೆ.
ಪೊಲೀಸರು ಸ್ಥಳವನ್ನು ತಲುಪಿದಾಗ ಹಲ್ಲೆಕೋರರು ಪರಾರಿಯಾಗಿದ್ದು, ಆಕೆಯನ್ನು ಮನೆ ತಲುಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನಿನ್ನೂ ದಾಖಲಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News