ರಾಮವೃಕ್ಷ ಯಾದವನ ಮೂವರು ನಿಕಟವರ್ತಿಗಳ ವಿರುದ್ಧ ಎನ್ಎಸ್ಎ
ಮಥುರಾ,ಆ.13: ಇಲ್ಲಿಯ ಜವಾಹರ್ ಬಾಗನ್ನು ಅತಿಕ್ರಮಿಸಿಕೊಂಡು ಸರಕಾರಕ್ಕೇ ಸವಾಲೊಡ್ಡಿದ್ದ ಆಝಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿಯ ನಾಯಕ ರಾಮವೃಕ್ಷ ಯಾದವನ ಮೂವರು ನಿಕಟವರ್ತಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ)ಯಡಿ ಆರೋಪಗಳನ್ನು ಹೊರಿಸಲಾಗಿದೆ.
ಯಾದವನ ಸೇನೆಯ ಕಮಾಂಡರ್ ಚಂದನ ಬೋಸ್, ಆತನ ಭದ್ರತಾ ಅಧಿಕಾರಿ ವೀರೇಶ ಯಾದವ ಮತ್ತು ಹಣಕಾಸು ನೆರವು ಒದಗಿಸುತ್ತಿದ್ದ ರಾಕೇಶ್ ಗುಪ್ತಾ ಅವರು ಈ ಮೂವರು ಆರೋಪಿಗಳಾಗಿದ್ದಾರೆ ಎಂದು ನಗರ ಎಸ್ಪಿ ಅಲೋಕ್ ಪ್ರಿಯದರ್ಶಿ ತಿಳಿಸಿದರು.
ಸರಕಾರಿ ಭೂಮಿಯ ಅತಿಕ್ರಮಣ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಆರೋಪಗಳಲ್ಲಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
ಕಳೆದ ಜೂನ್ನಲ್ಲಿ ಅತಿಕ್ರಮಿತ ಭೂಮಿಯ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಮತ್ತು ಅತಿಕ್ರಮಣದಾರರ ನಡುವಿನ ಘರ್ಷಣೆಗಳಲ್ಲಿ ಒಟ್ಟು 29 ಜನರು ಕೊಲ್ಲಲ್ಪಟ್ಟಿದ್ದರು.
ಘಟನೆಯ ಕುರಿತು ತನಿಖೆಯನ್ನು ಕೈಗೊಂಡಿರುವ ಏಕ ಸದಸ್ಯ ನ್ಯಾಯಾಂಗ ಅಯೋಗವು ಈವರೆಗೆ 57 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.