ಮಹಾಡ್ ದುರಂತ: ನೀರುಪಾಲಾಗಿದ್ದ ಎಸ್ಯುವಿ ಪತ್ತೆ; ಎರಡು ಶವಗಳಿರುವ ಶಂಕೆ
ಮುಂಬೈ, ಆ.14: ಆ.2ರಂದು ಮಹಾಡ್ ಬಳಿ ಭಾರೀ ಮಳೆಯಿಂದಾಗಿ ಬ್ರಿಟಿಷರ ಕಾಲದ ಸೇತುವೆ ಕುಸಿದು ಸಾವಿತ್ರಿ ನದಿಯಲ್ಲಿ ನಾಪತ್ತೆಯಾಗಿರುವವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ರವಿವಾರ 11ನೇ ದಿನಕ್ಕೆ ಕಾಲಿರಿಸಿದ್ದು, ಟವೇರಾ ಎಸ್ಯುವಿ ಅವಶೇಷಗಳನ್ನು ನೌಕಾಪಡೆಯ ಮುಳುಗುಗಾರರು ಪತ್ತೆ ಹಚ್ಚಿದ್ದಾರೆ. ವಾಹನದಲ್ಲಿ ಎರಡು ಶವಗಳು ಸಿಕ್ಕಿಹಾಕಿಕೊಂಡಿವೆ ಎಂದು ಶಂಕಿಸಲಾಗಿದೆ.
ವಾಹನ ಮತ್ತು ಶವಗಳನ್ನು ನೀರಿನಿಂದ ಮೇಲಕ್ಕೆತ್ತುವ ಪ್ರಯತ್ನ ನಡೆಯುತ್ತಿದ್ದು, ಇನ್ನೂ 12 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಘಟಕದ ನಿರ್ದೇಶಕ ಸುಹಾಸ ದಿವಸೆ ತಿಳಿಸಿದರು.
ಕುಸಿದಿರುವ ಸೇತುವೆಯಿಂದ ಸುಮಾರು 300 ಮೀ.ದೂರದಲ್ಲಿ 4-5 ಮೀಟರ್ ಆಳದಲ್ಲಿ ನದಿಯಲ್ಲಿ ವಾಹನದ ಅವಶೇಷಗಳು ಪತ್ತೆಯಾಗಿವೆ. ಅದರಲ್ಲಿ ಎರಡು ಶವಗಳಿರುವ ಸಾಧ್ಯತೆಯಿದ್ದು, ಅದನ್ನು ಮೇಲಕ್ಕೆತ್ತಲು ನೌಕಾಪಡೆಯ ಮುಳುಗುಗಾರರು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ಜಂಟಿಕಾರ್ಯಾಚರಣೆ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದರು.