ಸ್ವಾತಂತ್ರ ಕೆಲವರ ಸೊತ್ತಲ್ಲ: ರಾಹುಲ್
ಹೊಸದಿಲ್ಲಿ, ಆ.15: ದಲಿತರ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಸೋಮವಾರ, ಸ್ವಾತಂತ್ರ ಎಂದಿಗೂ ಕೆಲವರ ಸೊತ್ತಲ್ಲ. ದ್ವೇಷ ಹರಡುವ ಶಕ್ತಿಗಳು ಇದನ್ನು ಹೊಸಕಿ ಹಾಕಲು ಅವಕಾಶ ನೀಡಬಾರದು ಎಂದು ಕರೆ ನೀಡಿದ್ದಾರೆ.
ನಮ್ಮ ಕೆಲವರ ಮೇಲೆ ಇಂಥ ಶಕ್ತಿಗಳು ಅಪಾಯ ತಂದೊಡ್ಡಿವೆ. ಇತ್ತೀಚಿನ ದಿನಗಳಲ್ಲಿ ಇದನ್ನು ನಾವು ಕಾಣುತ್ತೇವೆ. ಸ್ವಾತಂತ್ರ ಕೆಲವರ ಸ್ವತ್ತಾಗಬಾರದು. ಇದು ಎಲ್ಲರ ಸ್ವತ್ತಾಗಬೇಕು. ದೇಶದ ಪ್ರತಿಯೊಬ್ಬರಿಗೂ ಗೌರವದ ಹಕ್ಕು ಮತ್ತು ಜೀವಿಸುವ ಸ್ವಾತಂತ್ರ ಇದೆ. ತಮ್ಮ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಲು ಅವಕಾಶವಿದೆ ಎಂದು ಸ್ವಾತಂತ್ರ ದಿನ ಸಂದೇಶದಲ್ಲಿ ಹೇಳಿದ್ದಾರೆ.
ಯಾರು ಕೂಡಾ ಭೀತಿಯಿಂದ ಜೀವಿಸುವಂತಾಗಬಾರದು ಎನ್ನುವುದು ನಮ್ಮ ಆಕಾಂಕ್ಷೆಯಾಗಬೇಕು. ಸತ್ಯಕ್ಕಾಗಿ ಸದಾ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಅವರು ರಾಷ್ಟ್ರಧ್ವಜವನ್ನು ಮೊಟ್ಟಮೊದಲ ಬಾರಿಗೆ ರಾಹುಲ್ ಹಾರಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ.ಆ್ಯಂಟನಿ, ಗುಲಾಂ ನಬಿ ಆಝಾದ್, ಆನಂದ್ ಶರ್ಮಾ ಭಾಗವಹಿಸಿದ್ದರು.