ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ: ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಹೊಸದಿಲ್ಲಿ, ಆ.17: ಗೋವಧೆಗೆ ಅನುಮತಿಯಿರುವ ರಾಜ್ಯಗಳಿಂದ ತಂದ ಗೋಮಾಂಸವನ್ನು ಮಹಾರಾಷ್ಟ್ರದಲ್ಲಿ ತಿನ್ನಬಹುದೆಂಬ ಬಾಂಬೆ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿರುವ ಅರ್ಜಿಯೊಂದರ ಸಂಬಂಧ ಸುಪ್ರೀಂಕೋರ್ಟ್ ಬುಧವಾರ ರಾಜ್ಯಸರಕಾರಕ್ಕೆ ನೋಟಿಸ್ ಕಳುಹಿಸಿದೆ.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಡಿವೈ ಚಂದ್ರಚೂಡರಿದ್ದ ಪೀಠವೊಂದು ಅಖಿಲಭಾರತ ಕೃಷಿ ಗೋ ಸೇವಾ ಸಂಘ ದಾಖಲಿಸಿದ್ದ ಅರ್ಜಿಯ ಮೇಲೆ ಈ ನೋಟಿಸ್ ಜಾರಿಗೊಳಿಸಿದೆ. ಜಾನುವಾರು ವಧೆ ಕಾನೂನುಬದ್ಧವಾಗಿರುವ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಗೋಮಾಂಸ ತರಲು ಅವಕಾಶ ನೀಡಿದ್ದ ಹೈಕೋರ್ಟ್ ತೀರ್ಪಿನ ಭಾಗವನ್ನು ವಕೀಲ ಮನೀಶ್ ಸಿಂಘ್ವಿ ವಿರೋಧಿಸಿದ್ದರು.
ಆದಾಗ್ಯೂ, 30 ಜನರ ಇನ್ನೊಂದು ಗುಂಪು ಮಹಾರಾಷ್ಟ್ರ ಜಾನುವಾರು ಸಂರಕ್ಷಣೆ(ತಿದ್ದುಪಡಿ) ಕಾಯ್ದೆ-2015ನ್ನು ಎತ್ತಿ ಹಿಡಿದ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನ ಮೆಟ್ಟಲೇರಿತ್ತು.
ಆಹಾರದ ಆಯ್ಕೆ ತನ್ನ ಹಕ್ಕೆಂದು ಪ್ರತಿಪಾದಿಸಿ ಈ ಗುಂಪು ನಿಷೇಧವನ್ನು ಪ್ರಶ್ನಿಸಿತ್ತು.
ಹೈಕೋರ್ಟ್ನ ತೀರ್ಪು ಮೇ 6ರಂದು ಬಂದಿತ್ತು.