ಉತ್ತರ ಪ್ರದೇಶದಲ್ಲಿ ಸಹಾಯಕ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ’ಗಾಂಧೀಜಿ ಮತ್ತು ಬಚ್ಚನ್’!
ಲಕ್ನೋ, ಆ.19:ಉತ್ತರ ಪ್ರದೇಶದಲ್ಲಿ ಸಹಾಯಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಮಹಾತ್ಮಗಾಂಧಿಯಿಂದ ಹಿಡಿದು ಅಮಿತಾಬ್ ಬಚ್ಚನ್ ಕೂಡಾ ಸೇರಿದ್ದಾರೆ. ಮಹಾತ್ಮಗಾಂಧಿ ಮೆರಿಟ್ ಲಿಸ್ಟ್ನಲ್ಲಿ ಶೇ.94 ಅಂಕಗಳೊಂದಿಗೆ ಅಗ್ರಸ್ಥಾನಿ!
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಪ್ರವೀಣ್ ಮಣಿ ತ್ರಿಪಾಠಿ ಹೇಳಿಕೆಯ ಪ್ರಕಾರ, ಇಂಥ ಹೆಸರುಗಳ 15 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೆರಿಟ್ ಲಿಸ್ಟ್ ತಡೆಹಿಡಿದು, ಈ ಅರ್ಜಿಗಳ ಪರಿಶೀಲನೆಗೆ ಸಮಿತಿ ನೇಮಿಸಲಾಗಿತ್ತು. ಅಂತಿಮವಾಗಿ ನಿರ್ಧಾರ ಕೈಗೊಂಡು ಮೆರಿಟ್ ಲಿಸ್ಟ್ನಲ್ಲಿ ಈ ಹೆಸರುಗಳನ್ನು ಸೇರಿಸಲು ನಿರ್ಧರಿಸಲಾಯಿತು ಎಂದು ತ್ರಿಪಾಠಿ ಹೇಳಿದರು.
ಅರ್ಷದ್ ಹೆಸರಿನ ಮಹಿಳೆಯೊಬ್ಬರು ದ್ವಿತೀಯ ಸ್ಥಾನಿಯಾಗಿದ್ದು, ಆಕೆಯ ಸರ್ನೇಮ್ ನಿಂದನಾತ್ಮಕವಾಗಿದೆ. ಯಾವ ಅಭ್ಯರ್ಥಿ ಕೂಡಾ ಹಾಜರಾಗದಿರುವುದರಿಂದ, ಇವು ಆನ್ಲೈನ್ನಲ್ಲಿ ಅನಗತ್ಯ ಕಿರಿಕಿರಿ ಉಂಟುಮಾಡುವ ಸಲುವಾಗಿ ಸಲ್ಲಿಸಿದ ನಕಲಿ ಅರ್ಜಿಗಳಾಗಿರಬೇಕು ಎಂಬ ಶಂಕೆಯಿದೆ ಎಂದು ತ್ರಿಪಾಠಿ ವಿವರಿಸಿದರು.
ಸಹಾಯಕ ಶಿಕ್ಷಕರಾಗಲು ಮೂಲಭೂತ ಬೋಧನಾ ಪ್ರಮಾಣಪತ್ರ ಹೊಂದಿದವರು ಅರ್ಹರಾಗಿದ್ದು, 16,448 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಲಕ್ನೋದಲ್ಲಿ 33 ಹುದ್ದೆಗಳಿಗೆ 800 ಅರ್ಜಿಗಳು ಸಲ್ಲಿಕೆಯಾಗಿವೆ.