ಜಿಶಾ ಕೊಲೆ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಣೆ
ಕೊಚ್ಚಿ,ಆಗಸ್ಟ್ 20: ಪೆರುಂಬಾವೂರ್ ಜಿಶಾ ಕೊಲೆ ಪ್ರಕರಣದ ಆರೋಪಿ ಆಮಿರುಲ್ ಇಸ್ಲಾಮ್ನ ಜಾಮೀನು ಅರ್ಜಿಯನ್ನು ಎರ್ನಾಕುಲಂ ಪ್ರಿನ್ಸಿಪಲ್ ಸೆಶನ್ಸ್ ಕೋರ್ಟ್ ತಳ್ಳಿಹಾಕಿದೆ. ಜಾಮೀನು ನೀಡಿದರೆ ಆರೋಪಿ ಭೂಗತನಾಗಬಹುದೆಂಬ ಶಂಕೆ ವ್ಯಕ್ತಪಡಿಸಿ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಧೀಶ ಎನ್.ಅನಿಲ್ ಕುಮಾರ್ ಜಾಮೀನು ನಿರಾಕರಿಸಿದ್ದಾರೆಂದು ವರದಿಯಾಗಿದೆ.
ಎಪ್ರಿಲ್ 28ಕ್ಕೆ ಪೆರುಂಬಾವೂರ್ನ ಏಕಕೋಣೆಯಿರುವ ಮನೆಯಲ್ಲಿ ಜಿಶಾರನ್ನು ಕ್ರೂರವಾಗಿ ಅತ್ಯಾಚಾರಗೈದು ಕೊಲೆನಡೆಸಿರುವುದು ಪತ್ತೆಯಾಗಿತ್ತು. ಗುರುತು ಪತ್ತೆ ಪರೇಡ್ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಪ್ರಕಾರ ಕೃತ್ಯವೆಸಗಿದಾತ ಆಮೀರುಲ್ ಇಸ್ಲಾಮ್ ಎಂದು ಪತ್ತೆಯಾಗಿತ್ತು. ಕೇಸ್ ಡೈರಿಯನ್ನು ಪರಿಶೀಲಿಸಿದಾಗ ಜಿಶಾರನ್ನು ಬರ್ಬರವಾಗಿ ಕೊಲೆನಡೆಸಲಾಗಿದೆ ಎಂದು ತಿಳಿದು ಬರುತ್ತಿದೆ. ಜಿಶಾ ನೀರುಕೇಳಿದಾಗ ಮದ್ಯವನ್ನು ಬಾಯಿಗೆ ಸುರಿಯಲಾಗಿದೆ ಎಂದು ಕೇಸ್ ಡೈರಿಯಲ್ಲಿದೆ. ಕೃತ್ಯ ನಡೆಸಿದ ಬಳಿಕ ಆರೋಪಿ ಅಸ್ಸಾಮ್ಗೆ ಪರಾರಿಯಾಗಿದ್ದ. ನಂತರ ಎಲ್ಲವೂ ಸುರಕ್ಷಿತ ಎಂದೆನಿಸಿದಾಗ ತಮಿಳ್ನಾಡಿನ ಕಾಂಚಿಪುರಕ್ಕೆ ಬಂದಿದ್ದ. ಘಟನೆ ನಡೆದು ಬಹಳ ದಿನಗಳ ನಂತರ ಜೂನ್ 16ರಂದು ಆರೋಪಿಯನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಿದರೆ ಇನ್ನು ಕೂಡಾ ತಪ್ಪಿಸಿಕೊಂಡು ಭೂಗತನಾಗುವ ಸಾಧ್ಯತೆ ಹೆಚ್ಚಿದೆ ಆದ್ದರಿಂದ ಜಾಮೀನು ನಿರಾಕರಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆಯೆಂದು ವರದಿಯಾಗಿದೆ.