ಸೇನೆಯಂತೆಯೇ ಆರೆಸ್ಸೆಸ್ ದೇಶರಕ್ಷಣೆಯ ಹೊಣೆ ಹೊತ್ತಿದೆ
ಹೊಸದಿಲ್ಲಿ, ಜ.4: ಸೇನೆಯನ್ನು ಹೊರತುಪಡಿಸಿದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದೇಶವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಿದೆ ಎಂದು ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಕೆ.ಟಿ.ಥಾಮಸ್ ಹೇಳಿರುವುದಾಗಿ ಬಿಜೆಪಿ ಮುಖಂಡ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದಾರೆ.
ಕೇರಳದ ಕೊಟ್ಟಾಯಂನಲ್ಲಿ ರವಿವಾರ ನಡೆದ ಆರೆಸ್ಸೆಸ್ ಬೋಧಕರ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಥಾಮಸ್ , ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸೇನೆಯ ಹೊರತಾಗಿ, ಅದೃಷ್ಟವಶಾತ್ ಆರೆಸ್ಸೆಸ್ ಭಾರತೀಯ ಹಿತರಕ್ಷಣೆ ನಡೆಸುತ್ತದೆ ಎಂದಿದ್ದಾರೆ. ಅಲ್ಲದೆ ದೇಶವನ್ನು ತುರ್ತುಪರಿಸ್ಥಿತಿಯ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿದ ಶ್ರೇಯಸ್ಸನ್ನು ಆರೆಸ್ಸೆಸ್ಗೆ ಸಲ್ಲಿಸಿದ್ದಾರೆ ಎಂದು ಸಂಬಿತ್ ಪಾತ್ರ ಟ್ವೀಟ್ ಮಾಡಿ ತಿಳಿಸಿದ್ದಾರೆ.
1996ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಥಾಮಸ್ , 2007ರಲ್ಲಿ ಪದ್ಮಭೂಷಣ ಪುರಸ್ಕಾರ ಪಡೆದಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದ ನ್ಯಾಯಪೀಠದ ಸದಸ್ಯರಾಗಿದ್ದರು.