ಹಿಂದೂಗಳಲ್ಲೂ ಹಫೀಝ್ ಸಯೀದ್ ನಂತಹವರು ಹುಟ್ಟಬಹುದು: ಪ್ರಕಾಶ್ ಅಂಬೇಡ್ಕರ್
ಮುಂಬೈ, ಜ. 6: ಪುಣೆ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದರೆ, ಹಿಂದೂಗಳಲ್ಲಿ ಕೂಡಾ ಹಫೀಝ್ ಸಯೀದ್ಗಳು ಹುಟ್ಟುವುದನ್ನು ಯಾರೂ ತಡೆಯಲಾಗದು ಎಂದು ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್ ಎಚ್ಚರಿಕೆ ನೀಡಿದ್ದಾರೆ.
"ಇದನ್ನು ತಡೆಯಬೇಕಾದರೆ, ಹಿಂಸೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಅಖಿಲ ಭಾರತೀಯ ಮಹಾತ್ಮ ಫುಲೆ ಸಮತಾ ಪರಿಷತ್ ಹಮ್ಮಿಕೊಂಡಿದ್ದ ವಿರೋಧ ಪಕ್ಷಗಳ ರ್ಯಾಲಿಯಲ್ಲಿ ಪ್ರಕಾಶ್ ಆಗ್ರಹಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಜನವರಿ 1ರ ಜಾತಿ ಹಿಂಸಾಚಾರದ ವಿರುದ್ಧ ಬುಧವಾರ ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದ್ದರು. ಹಿಂಸೆಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮಹಾರಾಷ್ಟ್ರ ಪೊಲೀಸರು ಅವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಅವರು ಆಪಾದಿಸಿದರು. ಸಾಮಾಜಿಕ ಪ್ರಜಾಪ್ರಭುತ್ವಕ್ಕಾಗಿ ಎಲ್ಲ ತುಳಿತಕ್ಕೊಳ ಗಾದ ಹಾಗೂ ಹಿಂದುಳಿದ ವರ್ಗಗಳು ತಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಒಗ್ಗೂಡಬೇಕು ಎಂದು ಮನವಿ ಮಾಡಿದರು.