ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಶಕ್ತಿಗಳ ಬಗ್ಗೆ ಜಾಗರೂಕರಾಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-01-06 14:17 GMT

ಸಾಗರ, ಜ.06: ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ರಾಜಕಾರಣ ನಡೆಸುವ ಶಕ್ತಿಗಳನ್ನು ಜನರು ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸರ್ಕಾರ ಬಸವಣ್ಣ ಅವರ ಕಾಯಕದಲ್ಲಿ ವಿಶ್ವಾಸವಿರಿಸಿದ್ದು, ಅದೇ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಬೇಕಾದುದು ಸರ್ಕಾರದ ಜವಾಬ್ದಾರಿ. ಇದನ್ನು ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಮೂಲಕ ಸಮಪರ್ಕವಾಗಿ ಅನುಷ್ಟಾನಗೊಳಿಸಲಾಗಿದೆ. ಅನ್ನಭಾಗ್ಯ ಕಾರ್ಯಕ್ರಮದಿಂದಾಗಿ ಯಾರೂ ಹಸಿವೆಯಿಂದ ಸಾಯುವ ಪರಿಸ್ಥಿತಿ ಉಂಟಾಗಿಲ್ಲ ಹಾಗೂ ಬರಗಾಲದ ವರ್ಷಗಳಲ್ಲೂ ಯಾರೂ ಗುಳೆ ಹೋಗುವ ಪರಿಸ್ಥಿತಿ ಉಂಟಾಗಿಲ್ಲ. ಉಚಿತವಾಗಿ ಅಕ್ಕಿ ನೀಡುವ ಯೋಜನೆಯನ್ನು ಬೇರೆ ಯಾವ ರಾಜ್ಯದಲ್ಲೂ ಅನುಷ್ಟಾನಗೊಳಿಸಲಾಗಿಲ್ಲ ಎಂದರು.

ಅನಿಲ ಭಾಗ್ಯ, ಆರೋಗ್ಯ ಭಾಗ್ಯ ಕಾರ್ಯಕ್ರಮವನ್ನು ಸದ್ಯದಲ್ಲೇ ಅನುಷ್ಟಾನಗೊಳಿಸಲಾಗುವುದು. ನಮ್ಮ ಸರ್ಕಾರ ಸಮಾಜದ ದೀನದಲಿತರ ಪರವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ರಾಜಕೀಯ ಮಾಡುವವರ ಪ್ರಯತ್ನಗಳು ರಾಜ್ಯದಲ್ಲಿ ಫಲಿಸುವುದಿಲ್ಲ. ಹೆಣದ ಮೇಲಿನ ರಾಜಕಾರಣ ನಾಚಿಕೆಗೇಡು. ಕೋಮುವಾದದ ಹೆಸರಿನಲ್ಲಿ ಮಾಡುವ ಕೀಳು ಮಟ್ಟದ ರಾಜಕಾರಣವನ್ನು ಎಲ್ಲರೂ ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಸಮಾಜವನ್ನು ಒಡೆಯುವ ಶಕ್ತಿಗಳು ಯಾವುದೇ ಧರ್ಮದವರಾಗಿದ್ದರೂ, ಅವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸರ್ಕಾರ ಬದ್ಧವಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್  ದೇಶಕ್ಕೆ ಕೊಟ್ಟಿರುವ ಸಂವಿಧಾನದ ಬಗ್ಗೆ ಗೌರವವಿಲ್ಲದವರು ಸಾಮಾಜಿಕ ಜೀವನದಲ್ಲಿ ಇರಲು ನಾಲಾಯಕ್ಕು. ಈ ಮಣ್ಣಿನ ಸಂಸ್ಕೃತಿ, ಇತಿಹಾಸದ ಬಗ್ಗೆ ಯಾರೂ ಪಾಠ ಹೇಳುವ ಅಗತ್ಯವಿಲ್ಲ. ಎಲ್ಲಾ ಮಹನೀಯರಿಗೆ, ಸಂತ ಶರಣರ ಜಯಂತಿಯನ್ನು ನಮ್ಮ ಸರ್ಕಾರ ಆಯೋಜಿಸುತ್ತಿದೆ ಎಂದರು. ಈ ಇಳಿ ವಯಸ್ಸಿನಲ್ಲೂ ಕಾಗೋಡು ತಿಮ್ಮಪ್ಪ ಅವರಲ್ಲಿರುವ ಬದ್ಧತೆಯನ್ನು ಇತರ ರಾಜಕಾರಣಿಗಳು
ಕಲಿಯಬೇಕಾಗಿದೆ. ಹೋರಾಟದ ಹಿನ್ನೆಲೆಯಿಂದ ಬಂದ ಅವರು ಜನರ ಕಲ್ಯಾಣದ ಬಗ್ಗೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಬಡವರ ಪರವಾದ ನಮ್ಮ ಸಾತ್ವಿಕ ಸಿಟ್ಟು ಸಮಾಜದ ಬಲಾಢ್ಯರಿಗೆ ದುರಂಹಕಾರ ರೀತಿ ಕಾಣುತ್ತದೆ. ಆದರೆ ನಾವು ನಂಬಿದ ಹಾದಿಯಲ್ಲಿ ನಡೆಯುತ್ತಿದ್ದು, ಜನರ ಕೆಲಸದ ವಿಷಯದಲ್ಲಿ ಮುನ್ನುಗ್ಗುವಾಗ ಯಾರನ್ನೂ ಪರಿಗಣಿಸುವ ಅಗತ್ಯವಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಕಳೆದ ನಾಲ್ಕುವರೆ ವರ್ಷಗಳಲ್ಲಿ ಮಾಡಿರುವ ಸಾಧನೆ ರಾಜ್ಯದ ಇತಿಹಾಸದಲ್ಲೇ ಚರಿತ್ರಾರ್ಹವಾದದ್ದು. ಪ್ರತಿಯೊಬ್ಬರಿಗೂ ನೆಲೆ ಒದಗಿಸುವುದು ಪ್ರಜಾಪ್ರಭುತ್ವದಲ್ಲಿ ಕರ್ತವ್ಯ. ಇದನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಪ್ರತಿಯೊಬ್ಬರಿಗೂ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಾಸಿಸುವವನಿಗೆ ನೆಲದ ಹಕ್ಕು ನೀಡುವ ಕ್ರಾಂತಿಕಾರಿ ಕ್ರಮವನ್ನು ಸರ್ಕಾರ ಅನುಷ್ಟಾನಗೊಳಿಸುತ್ತಿದೆ.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಟಾನಗೊಳಿಸಲಾಗಿರುವ 99 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ 25.95 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಮುಖ್ಯನಮಂತ್ರಿ ಅವರು ಈ ಸಂದರ್ಭದಲ್ಲಿ ನೆರವೇರಿಸಿದರು.

ಜಿಲ್ಲಾಡಳಿತದ ವತಿಯಿಂದ ಪ್ರಕಟಿಸಲಾದ ಸಾಗರ ತಾಲೂಕಿನಲ್ಲಿ ಕಳೆದ ನಾಲ್ಕುವರೆ ವರ್ಷಗಳ ಸಾಧನೆ ಕುರಿತಾದ ಪುಸ್ತಕವನ್ನು ಮುಖ್ಯಮಂತ್ರಿ ಅವರು ಬಿಡುಗಡೆ ಮಾಡಿದರು. ಫಲಾನುಭವಿಗಳಿಗೆ ಬಗರಹುಕುಂ ಹಕ್ಕುಪತ್ರ, 94ಸಿ ಅಡಿ ಹಕ್ಕುಪತ್ರ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ, ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ, ಗೋಶಾಲೆಗಳಿಗೆ ಅನುದಾನ ಚೆಕ್ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಸೌಲಭ್ಯಗಳನ್ನು ವಿತರಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಸ್ವಾಗತಿಸಿದರು. ಸಾಗರ ನಗರಸಭೆ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್,  ಮಲ್ಲಿಕಾರ್ಜುನ ಹಕ್ರೆ, ತಾಲೂಕು ಪಂಚಾಯತ್
ಅಧ್ಯಕ್ಷರು, ನಗರಸಭೆ ಅಧ್ಯಕ್ಷ ಬಿ.ಬಿ.ಫಸೀಹ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News