ಪಾಲೇಮಾಡು ಬೇಡಿಕೆ ಈಡೇರದಿದ್ದರೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ : ಬಹುಜನ ಕಾರ್ಮಿಕ ಸಂಘ ಎಚ್ಚರಿಕೆ

Update: 2018-01-07 17:45 GMT

ಮಡಿಕೇರಿ, ಜ.7: ಹೊದ್ದೂರು ಪಂಚಾಯತ್ ವ್ಯಾಪ್ತಿಯ ಪಾಲೆೇಮಾಡಿನಲ್ಲಿ ನೆಲೆಸಿರುವ 260ಕ್ಕೂ ಹೆಚ್ಚಿನ ಕುಟುಂಬ ಗಳಿಗೆ 94ಸಿ ಮೂಲಕ ಹಕ್ಕುಪತ್ರ ನೀಡುವ ಕುರಿತು ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದಲ್ಲಿ ಜ. 9ರಂದು ಮಡಿಕೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಸಂದರ್ಭ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಬಹುಜನ ಕಾರ್ಮಿಕ ಸಂಘ ಎಚ್ಚರಿಕೆ ನೀಡಿದೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಟನೆಯ ಅಧ್ಯಕ್ಷ ಕೆ. ಮೊಣ್ಣಪ್ಪ, ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಜ.8ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಈ ಸಂದರ್ಭ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡದಿದ್ದಲ್ಲಿ ಜ.9ರಂದು ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ತಿಳಿಸಿದರು.

ಕಂದಾಯ ಸಚಿವರು ಹಾಗೂ ಕಂದಾಯ ಕಾರ್ಯದರ್ಶಿ ಪ್ರಕಾರ ಬಡವರು ಸರಕಾರಿ ಭೂಮಿಯಲ್ಲಿ ವಾಸವಾಗಿದ್ದರೆ 94 ಸಿ ಮೂಲಕ ಹಕ್ಕುಪತ್ರವನ್ನು ನೀಡಬೇಕು. ಆದರೆ, ಸರಕಾರದ ಆದೇಶ ಕೊಡಗಿನಲ್ಲಿ ಜಾರಿಯಾಗುತ್ತಿಲ್ಲವೆಂದು ಮೊಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
2010ರಲ್ಲಿ ಪಾಲೇಮಾಡು ನಿವಾಸಿಗಳಿಗೆ ಹೊದ್ದೂರು ಪಂಚಾಯತ್‌ಗೆ ಸಂಬಂಧಿಸಿದಂತೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಹೀಗಿದ್ದೂ ಕಂದಾಯ ಅಧಿಕಾರಿಗಳು ಹಕ್ಕುಪತ್ರ ನೀಡದೆ ಸತಾಯಿಸುತ್ತಿದ್ದಾರೆಂದು ಮೊಣ್ಣಪ್ಪಆರೋಪಿಸಿದರು.

ಪಾಲೇಮಾಡು ಸ್ಮಶಾನದ ಜಾಗದ ವಿವಾದವನ್ನು ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದ ಅವರು, 2 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಬೇಕು ಎಂದರು.

ಬೇಡಿಕೆಗಳು: ಪಾಲೇಮಾಡು ನಿವಾಸಿಗಳಿಗೆ 94ಸಿಯಡಿ ಹಕ್ಕುಪತ್ರ ನೀಡಬೇಕು. ಪಾಲೇಮಾಡಿನಲ್ಲಿ ಕ್ರೀಡಾಂಗಣ ಸಂಸ್ಥೆ ಹಾಕಿರುವ ಬೇಲಿ ತೆರವುಗೊಳಿಸಿ ಸ್ಮಶಾನದ ಜಾಗವನ್ನು ದುರಸ್ತಿ ಪಡಿಸಬೇಕು. ಪಾಲೇಮಾಡು ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಬೇಕು. ವೀರಾಜಪೇಟೆ ತಾಲೂಕಿನ ಪೆರುಂಬಾಡಿಯಲ್ಲಿ ಪರಿಶಿಷ್ಟರಿಗೆ ಮಂಜೂರಾದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಳವಡಿಸಿರುವ ಬೇಲಿಯನ್ನು ತೆರವುಗೊಳಿಸಬೇಕು. ಪೆರುಂಬಾಡಿಯ ತೆರ್ಮೆಕಾಡು ಪೈಸಾರಿಯ ಅಂದಾಜು 100 ಪರಿಶಿಷ್ಟ ಕುಟುಂಬಗಳಿಗೆ ಜಾಗ ಮಂಜೂರು ಮಾಡಬೇಕು. ಚೆರಿಯಪರಂಬು ನಿವಾಸಿಗಳಿಗೆ 94ಸಿ ಯಡಿ ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೊದ್ದೂರು ಗ್ರಾಪಂ ಉಪಾಧ್ಯಕ್ಷೆ ಕುಸುಮಾವತಿ ತಿಳಿಸಿದರು.ಗೋಷ್ಠಿಯಲ್ಲಿ ಮುಖಂಡರಾದ ಎಂ.ಎಸ್.ಆನಂದ, ರಾಜು ಪಿ.ವಿ. ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News