ಚುನಾವಣೆ ಪ್ರಚಾರ: ಬಿಜೆಪಿ ಅಭ್ಯರ್ಥಿಗೆ ಚಪ್ಪಲಿಹಾರದ ಸ್ವಾಗತ!
ಭೋಪಾಲ್, ಜ.8: ಮಧ್ಯ ಪ್ರದೇಶದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಚಪ್ಪಲಿಹಾರ ಹಾಕಿದ ಘಟನೆ ಧಾರ್ ಜಿಲ್ಲೆಯ ಧಮ್ನೋದ್ ನಲ್ಲಿ ನಡೆದಿದೆ.
ಧಮ್ನೋದ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಎಂಬವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭ ಹಿರಿಯ ವ್ಯಕ್ತಿಯೊಬ್ಬರು ದಿನೇಶ್ ಶರ್ಮಾಗೆ ಚಪ್ಪಲಿಹಾರ ಹಾಕಿದ್ದಾರೆ.
“ಅವರು ನನ್ನವರೇ. ಯಾವುದೋ ವಿಷಯದಲ್ಲಿ ಬೇಸರಗೊಂಡು ಅವರು ಹೀಗೆ ಮಾಡಿದ್ದಾರೆ. ನಾವು ಒಟ್ಟಾಗಿ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನ ಹಾಗೆ” ಎಂದು ಶರ್ಮಾ ನಂತರ ಪ್ರತಿಕ್ರಿಯಿಸಿದ್ದಾರೆ.
ದಿನೇಶ್ ಶರ್ಮಾರಿಗೆ ಚಪ್ಪಲಿಹಾರ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. “ನಾವು ಎದುರಿಸುತ್ತಿರುವ ನೀರಿನ ಕೊರತೆ ಸಮಸ್ಯೆಯ ಬಗ್ಗೆ ಗಮನಸೆಳೆಯಲು ನಾನು ಹೀಗೆ ಮಾಡಿದೆ” ಎಂದು ಚಪ್ಪಲಿಹಾರ ಹಾಕಿದ ಹಿರಿಯ ವ್ಯಕ್ತಿ ಹೇಳಿದ್ದಾರೆ.
“ಇಲ್ಲಿ ನೀರಿನ ಸಮಸ್ಯೆಯಿದೆ. ಈ ಬಗ್ಗೆ ದೂರನ್ನೂ ನೀಡಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ನಮ್ಮ ಮಹಿಳೆಯರು ದೂರು ನೀಡಿದ್ದರೂ ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೂರು ನೀಡಲು ಹೋದ ರಾತ್ರಿ ಹಲವು ಬಾರಿ ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಆದ್ದರಿಂದ ನಾನು ಹೀಗೆ ಮಾಡಿದೆ” ಎಂದಿದ್ದಾರೆ.