ಶಿವಮೊಗ್ಗ: ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು

Update: 2018-01-09 14:29 GMT

ಶಿವಮೊಗ್ಗ, ಜ. 9: ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಮುಂಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ನಗರದ ಹೊರವಲಯ ಎನ್.ಟಿ.ರಸ್ತೆಯ ಹರಕೆರೆಯಲ್ಲಿ ನಡೆದಿದೆ. 

ಬಾಲಕೃಷ್ಣ ಹೆಬ್ಬಾರ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರು ಜ. 7 ರಂದು ಪುತ್ರಿಯನ್ನು ಕುಂದಾಪುರಕ್ಕೆ ಬಿಡಲು ತೆರಳಿದ್ದ ವೇಳೆ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಜ.8 ರಂದು ಮನೆಯ ಬಾಗಿಲ ಬೀಗ ಮುರಿದಿರುವುದನ್ನು ಗಮನಿಸಿದ ನೆರೆಹೊರೆಯವರು ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ರವಾನಿಸಿದ್ದಾರೆ. 

ತಕ್ಷಣವೇ ಬಾಲಕೃಷ್ಣ ಹೆಬ್ಬಾರ್ ಕುಂದಾಪುರದಿಂದ ಶಿವಮೊಗ್ಗಕ್ಕೆ ಆಗಮಿಸಿ ಮನೆಯಲ್ಲಿ ಪರಿಶೀಲಿಸಿದ್ದಾರೆ. ಎರಡು ಬೀರುವಿನಲ್ಲಿದ್ದ 54 ಸಾವಿರ ರೂ. ಮೌಲ್ಯದ 27 ಗ್ರಾಂ ತೂಕದ ಬಂಗಾರದ ಆಭರಣ, 8000 ರೂ. ಮೌಲ್ಯದ 235 ಗ್ರಾಂ ತೂಕದ ಬೆಳ್ಳಿಯ ಆಭರಣ, 87 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದು ತಿಳಿದು ಬಂದಿದೆ. ಒಟ್ಟಾರೆ ಕಳುವಾದ ನಗನಾಣ್ಯದ ಅಂದಾಜು ಮೊತ್ತ 1.49 ಲಕ್ಷ ರೂ.ಗಳಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News