ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಾಧೀಶರು ಎತ್ತಿದ ಸಮಸ್ಯೆ ಕಳವಳಕಾರಿ: ಪಿಎಫ್ಐ

Update: 2018-01-17 06:45 GMT

ಹೊಸದಿಲ್ಲಿ, ಜ. 15: ಸುಪ್ರೀಂ ಕೋರ್ಟ್‌ನ ನಾಲ್ಕು ಹಿರಿಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಕಾರ್ಯಚಟುವಟಿಕೆಯ ವಿರುದ್ದ ಮಾಧ್ಯಮದ ಮುಂದೆ ಎತ್ತಿದ ಸಮಸ್ಯೆಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸೆಕ್ರೆಟರಿಯೆಟ್ ಸಭೆಯು ತೀವ್ರ ಕಳವಳ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ನ ವ್ಯವಸ್ಥೆಯ ಒಳಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲವೆಂದು ಹಿರಿಯ ನಾಲ್ವರು ನ್ಯಾಯಾಧೀಶರು ವಿಷಯವನ್ನು ಸಾರ್ವಜನಿಕರ ಮುಂದೆ ತಂದಿಟ್ಟ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನ್ಯಾಯಾಲಯದ ಒಳಗೆ ಪರಿಹಾರ ಕಾಣದಿರುವುದು ಕೂಡಾ ಅತ್ಯಂತ ಗಂಭೀರವಾದುದು.

ಸುಪ್ರೀಂಕೋರ್ಟ್‌ನಲ್ಲಿ ಕೇಸುಗಳ ಅಸರ್ಮಪಕ ವಿಲೇವಾರಿ ಹಾಗೂ ನ್ಯಾಯಾಧೀಶರ ಮೇಲೆ ರಾಜಕೀಯ ಪ್ರಭಾವದ ಬಗ್ಗೆ ಈ ನಾಲ್ವರು ಗೌರವಾನ್ವಿತ ನ್ಯಾಯಾಧೀಶರು ದೇಶದ ಗಮನವನ್ನು ಸೆಳೆದಿದ್ದಾರೆ. ರಾಷ್ಟ್ರೀಯ ಮಹತ್ವವುಳ್ಳ ಹವಾರು ಪ್ರಕರಣಗಳನ್ನು ಅನೂಕೂಲವಾಗುವಂತೆ ವಹಿಸಿಕೊಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮೇಲೆ ಹೊರಿಸಿರುವ ಆರೋಪವು ಸರ್ವೋಚ್ಛ ನ್ಯಾಯಾಂಗ ವ್ಯವಸ್ಥೆಯ ತಟಸ್ಥ ಧೋರಣೆಯ ಬಗ್ಗೆ ದೇಶದ ಜನತೆಗೆ ಅನುಮಾನಸ್ಪದ ಸಂದೇಶವನ್ನು ನೀಡಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ಶಾರನ್ನೊಳಗೊಂಡ ಜಸ್ಟಿಸ್ ಲೋಯಾ ಸಂಶಯಾಸ್ಪದ ಸಾವಿನ ಪ್ರಕರಣವು ಅವುಗಳಲ್ಲಿ ಒಳಗೊಂಡಿದೆ.

ಜ.ದೀಪಕ್ ಮಿಶ್ರಾರವರು ತಮ್ಮ ಕ್ರಮಗಳನ್ನು ತಾಂತ್ರಿಕವಾಗಿ ಸರ್ಮರ್ಥಿಸಿಕೊಂಡರೂ ನೈತಿಕವಾಗಿ ಅವರು ದೇಶದ ಜನರ ಮುಂದೆ ಸಂಶಯಕ್ಕೀಡಾಗಿದ್ದಾರೆ. ಈ ಸಂಧಿಗ್ದತೆಯನ್ನು ಪರಿಹರಿಸದೆ ಇದ್ದಲ್ಲಿ ನ್ಯಾಯಾಂಗದ ವ್ಯವಸ್ಥೆಯ ಮೇಲೆ ಜನರಿಗಿದ್ದ ವಿಶ್ವಾಸವು ಧ್ವಂಸಗೊಳ್ಳುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್‌ನಲ್ಲಿ ಏನು ನಡೆಯುತ್ತಿದೆ ಎಂಬ ವಿವರಣೆಯನ್ನು ಮುಖ್ಯ ನ್ಯಾಯಾಧೀಶರು ದೇಶಕ್ಕೆ ನೀಡಲೇಬೇಕಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ವಾಮಮಾರ್ಗಗಳ ಮೂಲಕ ಮಧ್ಯಪ್ರವೇಶಿಸಿ ಹಾಳುಮಾಡುವ ಮತ್ತು ತನ್ನ ಪಕ್ಷದ ನಾಯಕರ ಅಪರಾಧಗಳನ್ನು ರಕ್ಷಿಸುವ ಕೃತ್ಯಗಳಿಂದ ಆಡಳಿತ ಪಕ್ಷ ಬಿಜೆಪಿ ದೂರವುಳಿಯಬೇಕಾಗಿದೆ.

ಪ್ರಸಕ್ತ ವಿದ್ಯಮಾನವನ್ನು ದೇಶದ ಜನತೆ ಹಾಗೂ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕೆಂದು ಸಭೆಯು ಆಗ್ರಹಿಸಿದೆ. ಹಾಗೂ ಸುಪ್ರಿಂಕೋರ್ಟ್‌ನ ತಟಸ್ಥ ನೀತಿ ಹಾಗೂ ಸ್ವಾತಂತ್ರವನ್ನು ಕಾಪಾಡಬೇಕಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

ಫೆ. 17ರಂದು ಪಾಪ್ಯುಲರ್ ಫ್ರಂಟ್ ಡೇ
ಫೆ. 17ರಂದು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಪಾಪ್ಯುಲರ್ ಫ್ರಂಟ್ ಡೇ ಆಚರಿಸಬೇಕೆಂದು ಸಭೆಯು ತೀರ್ಮಾನಿಸಿತು. ‘ನಾವು ಜನರೊಂದಿಗೆ, ಜನರು ನಮ್ಮೊಂದಿಗೆ’ ಎಂಬ ಘೋಷಣೆಯೊಂದಿಗೆ ದಿನಾಚರಣೆಯನ್ನು ನಡೆಸಲಿದ್ದೇವೆ. ಫೆ.10ರಿಂದ 16ರ ವರೆಗಿನ ದಿನಗಳನ್ನು ಸಾರ್ವಜನಿಕ ಸಂಪರ್ಕ ಸಪ್ತಾಹವಾಗಿ ಆಚರಿಸಲಾಗಿತ್ತಿದ್ದು ಪಾಪ್ಯುಲರ್ ಫ್ರಂಟ್‌ನ ಎಲ್ಲಾ ಯೂನಿಟ್‌ಗಳು ಸಂಘಟನೆಯ ಸಂದೇಶವನ್ನು ಸಮಾಜದ ಎಲ್ಲಾ ವರ್ಗಗಳ ಮನೆಬಾಗಿಲಿಗೆ ತಲುಪಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News