ಬಾಲಕಿಯ ಶವವನ್ನು ಅತ್ಯಾಚಾರಗೈದ ದುಷ್ಕರ್ಮಿಗಳು
ಪಾಣಿಪತ್ (ಹರ್ಯಾಣ), ಜ. 16: ಪಾಣಿಪಾತ್ ಜಿಲ್ಲೆಯ ಉರ್ಲಾನಾ ಕಲಾನ್ ಗ್ರಾಮದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಪ್ರಕರಣದ ಇಬ್ಬರು ಆರೋಪಿಗಳು, ತಾವು ಬಾಲಕಿಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಎಂದು ಒಪ್ಪಿಕೊಂಡಿದ್ದಾರೆ ಎಂದು ಪಾಣಿಪತ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪಾಣಿಪತ್ನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆರೋಪಿಗಳಾದ ಪ್ರದೀಪ್ ಕುಮಾರ್ (28) ಹಾಗೂ ಸಾಗರ್ (22) ರನ್ನು ಇನ್ನಷ್ಟು ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಗಳು ಬಾಲಕಿಯ ಗ್ರಾಮದವರು.
‘‘ನಾವು ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದೆವು. ಆದರೆ, ಆಕೆ ನಮ್ಮ ಪ್ರಯತ್ನಕ್ಕೆ ವಿರೋಧ ಒಡ್ಡಿದಳು. ಅದಕ್ಕಾಗಿ ಆಕೆಯನ್ನು ಕೊಂದು, ಅನಂತರ ಅತ್ಯಾಚಾರ ಎಸಗಿದೆವು ಎಂದು ಆರೋಪಿಗಳು ತನಿಖಾಧಿಕಾರಿಗಳಲ್ಲಿ ತಿಳಿಸಿದ್ದಾರೆ. ಆದರೆ, ಸತ್ಯ ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪಾಣಿಪತ್ ಪೊಲೀಸ್ ಅಧೀಕ್ಷಕ ರಾಹುಲ್ ಶರ್ಮಾ ತಿಳಿಸಿದ್ದಾರೆ.
ಗ್ರಾಮದ ಉರ್ಲಾನಾ ಕಲಾನ್ನ ಹೊರವಲಯದ ಕಾಲುವೆಯೊಂದರ ಸಮೀಪ ದಲಿತ ಬಾಲಕಿಯ ಅರೆ ನಗ್ನ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಬಾಲಕಿಯ ನೆರೆಯ ಇಬ್ಬರು ಪಾಲ್ಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಘಟನೆ ನಡೆದ ಕೆಲವು ಗಂಟೆಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು ಹಾಗೂ ವಿವಿಧ ಕಲಂಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ವೇಳೆ ಇಬ್ಬರು ಆರೋಪಿಗಳು, ತಾವು ಬಾಲಕಿಯ ಕುತ್ತಿಗೆಗೆ ಶಾಲು ಬಿಗಿದು ಹತೈಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರಲ್ಲಿದ್ದ ಬಾಲಕಿಯ ಅರೆ ಸುಟ್ಟ ಶಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಹುಲ್ ಶರ್ಮಾ ತಿಳಿಸಿದ್ದಾರೆ.