ಹಿಂದುತ್ವ ಹಿಟ್ಲರ್ವಾದದ ವಿಸ್ತರಿತ ರೂಪ: ನಯನತಾರಾ ಸೆಹಗಲ್
ಜೈಪುರ, ಜ.28: ಹಿಂದುತ್ವ ಸಿದ್ಧಾಂತದ ಬಗ್ಗೆ ವಾಗ್ದಾಳಿ ಮುಂದುವರಿಸಿರುವ ಖ್ಯಾತ ಲೇಖಕಿ ಹಾಗೂ ನೆಹರೂ- ಗಾಂಧಿ ಕುಟುಂಬಕ್ಕೆ ಸೇರಿದ ನಯನತಾರಾ ಸೆಹಗಲ್, "ಹಿಂದುತ್ವ ಸಿದ್ದಾಂತ ಹಿಟ್ಲರ್ ಹಾಗೂ ಮುಸೋಲಿನಿ ಸಿದ್ಧಾಂತಗಳ ವಿಸ್ತರಿತ ರೂಪ" ಎಂದು ಬಣ್ಣಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದಲ್ಲಿ ನಡೆಯುತ್ತಿರುವ ದಲಿತ ಚಳವಳಿ "ಅತ್ಯಂತ ಪ್ರಬಲ ಹಾಗೂ ಸಂಘಟಿತ ಧ್ವನಿ" ಎಂದು ವಿಶ್ಲೇಷಿಸಿದ್ದಾರೆ.
ಝೀ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, "ಭಾರತದಲ್ಲಿ ಮಾಸ್ಟರ್ರೇಸ್ (ಸರ್ವಶ್ರೇಷ್ಠ ಜನಾಂಗ) ಉತ್ಪಾದಿಸಲು ನಡೆಯುತ್ತಿರುವ ಪ್ರಯತ್ನಗಳು ಹಿಟ್ಲರ್ ಹಾಗೂ ಮುಸೋಲಿನಿ ಸಿದ್ದಾಂತದಿಂದ ಬಂದದ್ದು" ಎಂದು ಹೇಳಿದ್ದಾರೆ. ಕಾಮನ್ವೆಲ್ತ್ ಪ್ರಶಸ್ತಿ ವಿಜೇತೆ ಸೆಹಗಲ್ ಜೀವನದುದ್ದಕ್ಕೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಿಸುತ್ತ ಬಂದ ದಿಟ್ಟ ಲೇಖಕಿ.
"ಕ್ಷತ್ರಿಯ ಮನೋಭಾವ ಇಂದು ದೇಶದಲ್ಲಿ ವ್ಯಾಪಿಸಿದೆ. ನಾವು ಏನು ಮಾಡಬೇಕು ಎನ್ನುವುದನ್ನು ಅವರೇ ನಿರ್ಧರಿಸುವಂತಿದೆ. ದೇಶದಲ್ಲಿ ಇಂದು ಪಾಕಿಸ್ತಾನದ ವಿರುದ್ಧ ಮಾತ್ರವಲ್ಲ; ಆಂತರಿಕ ವಿರೋಧಿಗಳ ವಿರುದ್ಧವೂ ಯುದ್ಧ ನಡೆಯುವ ಸ್ಥಿತಿ ಇದೆ. ಪ್ರಸ್ತುತ ಸ್ಥಿತಿಯನ್ನು ಒಪ್ಪಿಕೊಳ್ಳದ ಎಲ್ಲರನ್ನೂ ಆಂತರಿಕ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ" ಎಂದು ವ್ಯಂಗ್ಯವಾಡಿದರು.