ಎಂಆರ್ ಐ ಯಂತ್ರದೊಳಗೆ ಸಿಲುಕಿ ಯುವಕ ಮೃತ್ಯು
ಹೊಸದಿಲ್ಲಿ, ಜ.28: ಎಂಆರ್ ಐ ಮೆಷಿನ್ ನೊಳಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮುಂಬೈಯಲ್ಲಿ ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತಪಟ್ಟ ಯುವಕನನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಸಂಬಂಧಿಕರನ್ನು ಕಾಣಲು ಆಸ್ಪತ್ರೆಗೆ ತೆರಳಿದ್ದ ರಾಜೇಶ್ ಆಮ್ಲಜನಕದ ಸಿಲಿಂಡರ್ ಹಿಡಿದಿದು ಎಂಆರ್ ಐ ಮೆಷಿನ್ ಹತ್ತಿರ ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಯಾವುದೇ ಕಬ್ಬಿಣದ ವಸ್ತುಗಳನ್ನು ಎಂಆರ್ ಐ ಕೋಣೆಯೊಳಗೆ ತರುವುದನ್ನು ನಿಷೇಧಿಸಲಾಗಿದ್ದರೂ ಸಿಲಿಂಡರ್ ಹಿಡಿದಿದ್ದ ರಾಜೇಶ್ ರನ್ನು ಆಸ್ಪತ್ರೆಯ ಸಿಬ್ಬಂದಿ ಒಳಗೆ ಕರೆದಿದ್ದಾರೆ ಇದರಿಂದಾಗಿ ಅಯಸ್ಕಾಂತೀಯ ಶಕ್ತಿಯಿಂದಾಗಿ ರಾಜೇಶ್ ಯಂತ್ರದ ನಡುವೆ ಸಿಲುಕುವಂತಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ರಾಜೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜೇಶ್ ಕುಟುಂಬಸ್ಥರು ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಜೊತೆ ಆಸ್ಪತ್ರೆಯೊಳಗೆ ಪ್ರತಿಭಟನೆ ನಡೆಸಿದರು.
ರಾಜೇಶ್ ಕೈಗೆ ಸಿಲಿಂಡರ್ ನೀಡಿದ್ದ ವಾರ್ಡ್ ಬಾಯ್ ಒಬ್ಬನನ್ನು ಅಮಾನತುಗೊಳಿಸಲಾಗಿದೆ. ರಾಜೇಶ್ ಕುಟುಂಬಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ರಾಜೇಶ್ ರನ್ನು ಕೋಣೆಯೊಳಕ್ಕೆ ಕರೆದಾಗ ಎಂಆರ್ ಐ ಮೆಷಿನ್ ಚಾಲೂ ಆಗಿತ್ತು. ಅವರು ಕೋಣೆಗೆ ಪ್ರವೇಶಿಸುತ್ತಿದ್ದಂತೆ ಅಯಸ್ಕಾಂತೀಯ ಶಕ್ತಿ ವೇಗವಾಗಿ ಅವರನ್ನು ಸೆಳೆದಿದೆ. ಇದಾಗಿ 2 ನಿಮಿಷಗಳಲ್ಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.