ಪದ್ಮಾವತ್: ಚಿತ್ರಮಂದಿರದ ಒಳಗೆ ಪೆಟ್ರೋಲ್ ಬಾಂಬ್ ಎಸೆದ ಆರೋಪಿಗಳ ಬಂಧನ

Update: 2018-01-29 15:33 GMT

ಮುಝಫರ್‌ನಗರ, ಜ.29: ಶನಿವಾರದಂದು ‘ಪದ್ಮಾವತ್’ ಸಿನೆಮಾವನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಒಳಗೆ ಪೆಟ್ರೋಲ್ ಬಾಂಬ್ ಎಸೆದ ಆರೋಪದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಭಿಷೇಕ್ ಮತ್ತು ಕೆರ್ನಲಿ ಎಂದು ಹೆಸರಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಆರೋಪಿಗಳು ಚಂದ್ರ ಟಾಕೀಸ್‌ಗೆ ಬೆಂಕಿ ಹಚ್ಚುವ ಸಲುವಾಗಿ ಚಿತ್ರಮಂದಿರದ ಒಳಗೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದರು ಎಂದು ವೃತ್ತ ಅಧಿಕಾರಿ ಹರೀಶ್ ಬಡೋರಿಯ ತಿಳಿಸಿದ್ದಾರೆ. ಘಟನೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಚಿತ್ರಮಂದಿರದ ಮಾಲಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಘಟನೆಯ ನಂತರ ಪದ್ಮಾವತ್ ಸಿನೆಮಾವನ್ನು ಪ್ರದರ್ಶಿಸುತ್ತಿದ್ದ ಇನ್ನೆರಡು ಚಿತ್ರಮಂದಿರಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್ ಸಿನೆಮಾ ಬಿಡುಗಡೆಗೆ ರಜಪೂತ ಕರ್ಣಿ ಸೇನೆ ವಿರೋಧ ವ್ಯಕ್ತಪಡಿಸುವ ಮೂಲಕ ಚಿತ್ರ ವಿವಾದಕ್ಕೀಡಾಗಿತ್ತು. ಇದೀಗ ಚಿತ್ರ ಬಿಡುಗಡೆಗೊಂಡಿರುವ ಪರಿಣಾಮ ಕರ್ಣಿಸೇನೆಯ ಕಾರ್ಯಕರ್ತರು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ದಾಂಧಲೆಯಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News