ಗೃಹಿಣಿ ಆತ್ಮಹತ್ಯೆ: ಪತಿ ಕುಟುಂಬದ ವಿರುದ್ಧ ಪೋಷಕರ ದೂರು
ನಾಗಮಂಗಲ, ಜ.29: ಗೃಹಿಣಿಯೊಬ್ಬಳು ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬಸ್ಥರ ಕಿರುಕುಳವೇ ಇದಕ್ಕೆ ಕಾರಣವೆಂದು ಆರೋಪಿಸಿ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ.
ಪಟ್ಟಣದ ಬಿ.ಎಂ.ರಸ್ತೆಯಲ್ಲಿನ ವಾಸಿಯಾದ ದಯಾನಂದ ಎಂಬುವರ ಪತ್ನಿ ಭಾಗ್ಯ(36) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾಳೆ. ಭಾನುವಾರ ರಾತ್ರಿ 8 ಗಂಟೆ ಸಮಯದಲ್ಲಿ ಮನೆಯೊಳಗಿನ ಕೊಠಡಿಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾಳೆ ಎನ್ನಲಾಗಿದೆ.
ಸುಮಾರು ಹೊತ್ತು ಆಕೆ ಕೊಠಡಿಯಿಂದ ಹೊರ ಬರದಿದ್ದಾಗ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕುಣಿಗಲ್ ತಾಲೂಕಿನ ಅಮೃತೂರಿನಿಂದ ರಾತ್ರಿಯೇ ಆಗಮಿಸಿದ ಮೃತ ಬಾಗ್ಯಳ ಪೋಷಕರು ಕುಟುಂಬಸ್ಥರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾರೆ.
ಬಹಳ ವರ್ಷಗಳಿಂದ ಮೃತ ಭಾಗ್ಯಳಿಗೆ ಮಕ್ಕಳಿರಲಿಲ್ಲ. ಇತ್ತೀಚೆಗಷ್ಟೇ ಮಗುವಾಗಿದ್ದು, ಅದು ಕೂಡ ತಿಂಗಳಲ್ಲಿ ಮೃತಪಟ್ಟಿತ್ತು. ಈ ವಿಚಾರವಾಗಿ ಕುಟುಂಬದಲ್ಲಿ ಕಿರುಕುಳವಿತ್ತು ಎನ್ನಲಾಗಿದೆ.
ತನ್ನ ಮಗಳು ಭಾಗ್ಯಳ ಸಾವಿಗೆ ಪತಿ ದಯಾನಂದ, ಅತ್ತೆ ಸಾಕಮ್ಮ ಮತ್ತು ಮೈದುನ ರಾಘವೇಂದ್ರ ಕಾರಣವೆಂದು ಮೃತಳ ತಾಯಿ ಗಂಗಮ್ಮ ದೂರು ನೀಡಿದ್ದು, ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ