ರಾಜ್ ನಾಥ್ ಸಿಂಗ್ ಗಾಗಿ 3 ಗಂಟೆ ಕಾಲ ಖಾಲಿಹೊಟ್ಟೆಯಲ್ಲಿ ಕಾದು ಬಸವಳಿದ ವಿಕಲಾಂಗರು
ಹೊಸದಿಲ್ಲಿ, ಜ.31: ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರು ವೀಲ್ ಚೇರ್ ವಿತರಿಸುವ ಫೋಟೊ ಕ್ಲಿಕ್ಕಿಸುವುದಕ್ಕಾಗಿ ಮಕ್ಕಳು ಸೇರಿದಂತೆ ವಿಕಲಾಂಗರನ್ನು ಅಧಿಕಾರಿಗಳು ಖಾಲಿ ಹೊಟ್ಟೆಯಲ್ಲಿ 3 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ ಘಟನೆಯೊಂದು ನಡೆದಿದೆ.
ಚಂಡೀಗಢದಲ್ಲಿ ಈ ಘಟನೆ ನಡೆದಿದ್ದು, 2 ವರ್ಷದ ಮಕ್ಕಳೂ ಕಾದು ಬಸವಳಿದಿದ್ದರು. ಇಲ್ಲಿನ ಸಂಸ್ಥೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ 300 ಹಾಸಿಗೆಗಳ ವಸತಿಕೇಂದ್ರವೊಂದನ್ನು ಉದ್ಘಾಟಿಸಲಿದ್ದರು. ಕಾರ್ಯಕ್ರಮಕ್ಕೆ ವಿಕಲಾಂಗ ಮಕ್ಕಳನ್ನೂ ಆಹ್ವಾನಿಸಲಾಗಿತ್ತು.
ಬೆಳಗ್ಗೆ 11:30 ಗಂಟೆಗೆ ಸಚಿವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ವಿಕಲಾಂಗ ಮಕ್ಕಳನ್ನು ಭೇಟಿಯಾಗುವುದಕ್ಕೆ ಮೊದಲು ವಿಐಪಿಗಳ ಜೊತೆ ತೆರಳಿದ್ದರು. ಸಚಿವರಿಗಾಗಿ ಕಾದಿದ್ದ ಮಕ್ಕಳು ಗಂಟೆಗಳ ಕಾಲ ಹಸಿವೆಯಿಂದ ಕೂರಬೇಕಾಯಿತು. ಮಧ್ಯಾಹ್ನದ ನಂತರ ಅತಿಥಿಗಳು ಬರುವವರೆಗೂ ಅವರಿಗೆ ಹೊರಹೋಗಲು ಅವಕಾಶ ನೀಡಲಿಲ್ಲ.
“ನನ್ನ ಮಗು ಹಸಿವಿನಿಂದ ಅಳುತ್ತಿದ್ದಾಳೆ. 9 ಗಂಟೆಯಿಂದ ನಾವು ಸಚಿವರಿಗಾಗಿ ಕಾಯುತ್ತಿದ್ದೇವೆ. ಈಗ 11:30ಯಾಗಿದೆ. ತುಂಬಾ ಹೊತ್ತಿನವರೆಗೆ ಕಾಯಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರೆ ನಾವು ಮಗಳಿಗಾಗಿ ತಿಂಡಿಯಾದರೂ ತರುತ್ತಿದ್ದೆ” ಎಂದು 2 ವರ್ಷದ ಮಗು ಮಾನ್ಯಾಳ ತಾಯಿ ಅನಿತಾ ಕುಮಾರಿ ಹೇಳುತ್ತಾರೆ.