ಮೂಡಿಗೆರೆ: ನಾಪತ್ತೆಯಾಗಿದ್ದ ಯುವಕರಿಬ್ಬರ ಮೃತದೇಹ ಕೆರೆಯಲ್ಲಿ ಪತ್ತೆ
Update: 2018-02-04 10:27 GMT
ಚಿಕ್ಕಮಗಳೂರು, ಫೆ.4: ನಿನ್ನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹವು ಕೆರೆಯಲ್ಲಿ ಪತ್ತೆಯಾದ ಘಟನೆ ಮೂಡಿಗೆರೆ ತಾಲೂಕಿನ ಮಾವಿನಗೂಡು ಸಮೀಪದ ಕಬ್ಬಿನಗದ್ದೆ ಎಂಬಲ್ಲಿ ಇಂದು ನಡೆದಿದೆ.
ಇಲ್ಲಿನ ನಿವಾಸಿಗಳಾದ ರಮೇಶ್ (18) ಮತ್ತು ಸಂದೇಶ್(25) ಕೆರೆಯಲ್ಲಿ ಮುಳುಗಿ ಮೃತಪಟ್ಟವರು. ಇವರಿಬ್ಬರ ಮೃತದೇಹ ಕಬ್ಬಿನಗದ್ದೆ ಕೆರೆಯಲ್ಲಿ ಪತ್ತೆಯಾಗಿದೆ.
ಕೆರೆಯಲ್ಲಿ ಬಿದ್ದಿದ್ದ ಕ್ಯಾನ್ ತೆಗೆಯಲು ಹೋದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ನಾಪತ್ತೆಯಾಗಿದ್ದ ರಮೇಶ್ ಮತ್ತು ಸಂದೇಶ್ ಅವರಿಗಾಗಿ ಹುಡುಕಾಟ ನಡೆಸಿದಾಗ ಕಬ್ಬಿನಗದ್ದೆಯ ಕೆರೆಯ ಬಳಿ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಕೆರೆಯಲ್ಲಿ ತೀವ್ರ ಶೋಧ ನಡೆಸಿದಾಗ ಅವರಿಬ್ಬರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.