ಇಪ್ಪತ್ತು ವರ್ಷದ ಬಳಿಕ ಜೈಲಿನಿಂದ ಬಿಡುಗಡೆಯಾದ ಕೈದಿಗೆ ಮತ್ತೆ ಸೆರೆಮನೆ ಸೇರುವಾಸೆ !
ಪಿತೋರ್ಗಢ, ಫೆ. 5: ಕೋಪದಿಂದ ಪತ್ನಿ ಹಾಗೂ ಮಗಳನ್ನು ಕೊಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪುಷ್ಕರ್ ದತ್ ಭಟ್ ಕಳೆದ ಆಗಸ್ಟ್ನಲ್ಲಿ ಬಿಡುಗಡೆ ಯಾಗಿದ್ದ. ಹುಟ್ಟೂರು ಪಿತೋರ್ಗಢ ಜಿಲ್ಲೆಯ ಬಸ್ತಾದಿ ಗ್ರಾಮಕ್ಕೆ ಬಂದು ನೋಡಿದಾಗ ಕಂಡದ್ದು ಸ್ಮಶಾನಸದೃಶ ಗ್ರಾಮ.
2016ರ ಜುಲೈ ಪ್ರವಾಹ ಇಡೀ ಗ್ರಾಮದಲ್ಲಿದ್ದ ಎಲ್ಲ 21 ಮಂದಿಯನ್ನೂ ಕೊಚ್ಚಿಕೊಂಡು ಹೋಗಿದೆ, ಇಡೀ ಹಳ್ಳಿಯಲ್ಲಿ ಒಂದು ಜೀವವೂ ಉಳಿದಿಲ್ಲ. ಖಾಲಿ ಮುರುಕಲು ಮನೆಗಳಷ್ಟೇ ಕಾಣಸಿಗುತ್ತವೆ.
"ಇದು ದೆವ್ವದ ಗ್ರಾಮ. ಇಲ್ಲಿರುವುದಕ್ಕಿಂತ ಮತ್ತೆ ಜೈಲಿಗೆ ಹೋಗುವುದೇ ಲೇಸು" ಎನ್ನುವುದು 52 ವರ್ಷದ ಭಟ್ ಅಭಿಪ್ರಾಯ. "ಇಡೀ ಗ್ರಾಮದಲ್ಲಿ ವಾಸಿಸುವ ಮನುಷ್ಯಜೀವಿ ನಾನು ಮಾತ್ರ" ಎಂದಿದ್ದು, "ನನ್ನನ್ನು ಮತ್ತೆ ಜೈಲಿಗೆ ಕಳುಹಿಸಿ" ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಯವ್ವನದ ಬಹುಪಾಲು ದಿನಗಳನ್ನು ಉದ್ಧಾಮ್ಸಿಂಗ್ ನಗರದ ಸಿತಾರ್ಗಂಜ್ ಜೈಲಿನಲ್ಲೇ ಭಟ್ ಕಳೆದಿದ್ದಾರೆ. "ಅಲ್ಲಿ ಕನಿಷ್ಠ ಕೈದಿಗಳಾದರೂ ಇದ್ದಾರೆ. ಇಲ್ಲಿ ದೆವ್ವಗಳು ಮತ್ತು ಬೇಸರದ ನೆನಪುಗಳಷ್ಟೇ ಉಳಿದಿವೆ" ಎಂದು ಅವರು ವಿವರಿಸುತ್ತಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಆರು ತಿಂಗಳಿಂದ ಏಕಾಂಗಿ ಜೀವನ ನಡೆಸುತ್ತಿರುವ ಭಟ್ ಇದೀಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಅಲ್ಲಿ ಇನ್ನು ಒಬ್ಬಂಟಿಯಾಗಿರುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.